Ballaryರಾಜಕೀಯ

ಸಿದ್ದಣ್ಣನನ್ನು ನೋಡಿ ನೋವಾಯ್ತು, ಕಾಂಗ್ರೆಸ್ ನದ್ದು ಗೆದ್ದೆತ್ತಿನ ಬಾಲ ಹಿಡಿಯೋ ರಾಜಕೀಯ-ಶ್ರೀರಾಮುಲು

Sri ramulu says feel pitty on siddaramaiah bjp rule in 2028

ಬಳ್ಳಾರಿ/ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿದು ಡಿ.ಕೆ. ಶಿವಕುಮಾರ್ ಸಿಎಂ ಆಗಿ ಗದ್ದುಗೆ ಏರುತ್ತಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕರು ಭರ್ಜರಿ ರಾಜಕೀಯ ದಾಳಿ ಆರಂಭಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ. ಶ್ರೀರಾಮುಲು, ಕಾಂಗ್ರೆಸ್‌ನ ಆಂತರಿಕ ಒಳಜಗಳ ಹಾಗೂ ಕುರ್ಚಿ ರಾಜಕಾರಣದ ವಿರುದ್ಧ ಅಕ್ಷರಶಃ ಬೆಂಕಿ ಉಗುಳಿದ್ದಾರೆ.

ಸಿದ್ದರಾಮಯ್ಯ ಮುಖ ನೋಡಿದ್ರೆ ದುಃಖ ಆಗುತ್ತೆ!


ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಭಾರಿ ಅನುಕಂಪ ವ್ಯಕ್ತಪಡಿಸಿದ ಶ್ರೀರಾಮುಲು, “ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿದಿರುವುದು ಯಾವುದೇ ಸ್ವಯಂಪ್ರೇರಿತ ನಿರ್ಧಾರವಲ್ಲ. ಇದು ಕೇವಲ ಕಾಂಗ್ರೆಸ್‌ನಲ್ಲಿ ನಡೆದ ಅಧಿಕಾರ ದಾಹ ಮತ್ತು ಆಂತರಿಕ ಒಳಜಗಳದ ಫಲ. ರಾಜೀನಾಮೆ ನೀಡುವಾಗ ಸಿದ್ದರಾಮಯ್ಯನವರ ಮುಖ ನೋಡಿ ನನಗೆ ವೈಯಕ್ತಿಕವಾಗಿ ತುಂಬಾ ನೋವಾಯಿತು. ಒಬ್ಬ ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿದ್ದ ಅಹಿಂದ ನಾಯಕನನ್ನೇ ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ಸಂಚು ನಡೆಸಿ ಕುರ್ಚಿಯಿಂದ ಕೆಳಗಿಳಿಸಿದೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.

ಕುರುಬ ಸಮುದಾಯಕ್ಕೆ ಭಾರಿ ದ್ರೋಹ
ಮುಂದುವರಿದು ಮಾತನಾಡಿದ ಅವರು, “ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಇಡೀ ರಾಜ್ಯದ ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಭಾರಿ ನೋವುಂಟಾಗಿದೆ. ಕಾಂಗ್ರೆಸ್‌ನವರು ಕೇವಲ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರನ್ನು ಬಳಸಿಕೊಂಡು ಈಗ ನಿಷ್ಕರುಣೆಯಿಂದ ಪಕ್ಕಕ್ಕೆ ತಳ್ಳಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲೇ ನೋಡುವುದಾದರೆ, ಇಲ್ಲಿ ಗೆದ್ದಿರುವ ಬಹುತೇಕ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ಮುಖ ನೋಡಿ ಮತ್ತು ಅವರ ಹೆಸರಿನಿಂದಲೇ ಗೆದ್ದು ಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ ತಕ್ಷಣ ಈ ಶಾಸಕರುಗಳ ನಿಲುವು ಸಂಪೂರ್ಣ ಬದಲಾಗಿದೆ. ರಾಜಕೀಯದಲ್ಲಿ ಈಗ ‘ಗೆದ್ದ ಎತ್ತಿನ ಬಾಲ ಹಿಡಿಯುವ’ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ” ಎಂದು ಸ್ವಪಕ್ಷದ ನಾಯಕನ ಕೈಬಿಟ್ಟ ಕಾಂಗ್ರೆಸ್ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ!
ಕಾಂಗ್ರೆಸ್ ಪಕ್ಷದ ಈ ಆಂತರಿಕ ಕಚ್ಚಾಟ ಮತ್ತು ದರೋಡೆ ರಾಜಕೀಯದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದ ಶ್ರೀರಾಮುಲು, “ಈ ಅಧಿಕಾರ ಹಸ್ತಾಂತರದ ಡ್ರಾಮಾವನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿಗಿಂತ ಕುರ್ಚಿ ಕಾದಾಟವೇ ಮುಖ್ಯವಾಗಿದೆ. ಹೀಗಾಗಿ, ಬರುವ 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಮತ್ತು ಭರ್ಜರಿ ಬಹುಮತದೊಂದಿಗೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ” ಎಂದು ಭವಿಷ್ಯ ನುಡಿದರು.

#FreedomTV #SriramuluSpitsFire #BSriramulu #SiddaramaiahResignation #DKShivakumarCM #BallariPolitics #CongressInternalWar #AhindaPolitics #KurubaCommunity #BJPvsCongress #KarnatakaPolitics #BreakingNews #KannadaNews #SriramuluSpeech #Mission2028

Comments (0)

Your email address will not be published. Required fields are marked *

Back to top button