ಹರಿಯಾಣ: ಸಿಕ್ರಿಯಲ್ಲಿರುವ ‘ಮಿಲನ್ ಬ್ಯಾಂಕ್ವೆಟ್ ಹಾಲ್’ನಲ್ಲಿ ನಡೆದಿರುವ ಈ ಘಟನೆಯು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಮರಾಠಾ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶೌರ್ಯದ ಸಂಕೇತವಾದ ಮಹಾರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಶೌಚಾಲಯದ ಬಾಗಿಲುಗಳ ಮೇಲೆ ಬಳಸಿರುವುದು ಇತಿಹಾಸಕ್ಕೆ ಮತ್ತು ದೇಶದ ಅಸ್ಮಿತೆಗೆ ಮಾಡಿದ ಘೋರ ಅವಮಾನವಾಗಿದೆ.
ಸಾರ್ವಜನಿಕವಾಗಿ ಶೌಚಾಲಯದ ಪುರುಷ ಮತ್ತು ಮಹಿಳಾ ವಿಭಾಗಗಳನ್ನು ಗುರುತಿಸಲು ನಮ್ಮ ರಾಷ್ಟ್ರೀಯ ವೀರರ ಚಿತ್ರಗಳನ್ನು ಬಳಸಿರುವುದು ಆಡಳಿತ ಮಂಡಳಿಯ ಬೇಜವಾಬ್ದಾರಿತನ ಮತ್ತು ಸಂವೇದನಾಶೂನ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಿಂದೂ ಸಂಘಟನೆಗಳು ಹಾಗೂ ಇತಿಹಾಸ ಪ್ರೇಮಿಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಇದು ಕೇವಲ ಒಂದು ಸ್ಥಳಕ್ಕೆ ಸೀಮಿತವಾಗದೆ ದೇಶಾದ್ಯಂತ ಆಕ್ರೋಶದ ಅಲೆಯನ್ನು ಎಬ್ಬಿಸಿದೆ.
ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದ ಮಹಾನ್ ವ್ಯಕ್ತಿಗಳನ್ನು ಕೀಳಾಗಿ ಚಿತ್ರಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಇಂತಹ ಘಟನೆಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುತ್ತವೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.


