
ನವದೆಹಲಿ/ಚೆನ್ನೈ: ದಕ್ಷಿಣ ಭಾರತದ ರಾಜಕೀಯದಲ್ಲಿ ಅತಿ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. ತಮಿಳುನಾಡು ಬಿಜೆಪಿಯ ಫೈರ್ಬ್ರಾಂಡ್ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ (BJP) ಗುಡ್ಬೈ ಹೇಳಿದ್ದಾರೆ. ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ತಮ್ಮ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆ ಪತ್ರವನ್ನು ಹಸ್ತಾಂತರಿಸುವ ಮೂಲಕ, ಕಮಲ ಪಾಳೆಯದೊಂದಿಗಿನ ತಮ್ಮ 6 ವರ್ಷಗಳ ಸುದೀರ್ಘ ಸಂಬಂಧವನ್ನು ಅಣ್ಣಾಮಲೈ ಕೊನೆಗೊಳಿಸಿದ್ದಾರೆ.

ಮೈತ್ರಿ ರಾಜಕಾರಣಕ್ಕೆ ಅಣ್ಣಾಮಲೈ ಬಲಿ!
ಕಳೆದ ಕೆಲವು ಸಮಯದಿಂದ ಅಣ್ಣಾಮಲೈ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ರಾಜೀನಾಮೆಗೆ ಪ್ರಮುಖ ಕಾರಣಗಳೆಂದರೆ ತಮಿಳುನಾಡಿನಲ್ಲಿ ಭ್ರಷ್ಟಾಚಾರ ಮುಕ್ತ ರಾಜಕಾರಣ ಮಾಡಬೇಕು ಎಂದು ಹೊರಟಿದ್ದ ಅಣ್ಣಾಮಲೈ ಅವರಿಗೆ, ಎಐಎಡಿಎಂಕೆ (AIADMK) ಪಕ್ಷವನ್ನು ಮರಳಿ ಎನ್ಡಿಎ (NDA) ಒಕ್ಕೂಟಕ್ಕೆ ಸೇರಿಸಿಕೊಂಡ ಹೈಕಮಾಂಡ್ ನಿರ್ಧಾರ ಅಸಮಾಧಾನ ತಂದಿತ್ತು. ವಿಧಾನಸಭಾ ಚುನಾವಣೆಯ ಮೈತ್ರಿ ಮತ್ತು ಪ್ರಚಾರದಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗದಿರುವುದಕ್ಕೆ ಅವರು ರೊಚ್ಚಿಗೆದ್ದಿದ್ದರು.
ಭಾಷಾ ನೀತಿಯ ವಿರುದ್ಧ ಬಂಡಾಯ– ಇತ್ತೀಚೆಗೆ ಕೇಂದ್ರ ಸರ್ಕಾರ 9ನೇ ತರಗತಿ ವಿದ್ಯಾರ್ಥಿಗಳಿಗೆ ತಂದಿದ್ದ ‘ತ್ರಿಭಾಷಾ ನೀತಿ’ಯನ್ನು (ಮೂರು ಭಾಷೆ ಕಡ್ಡಾಯ) ಅಣ್ಣಾಮಲೈ ಬಹಿರಂಗವಾಗಿ ವಿರೋಧಿಸಿ ತಮಿಳು ಹಿತಾಸಕ್ತಿ ಪರ ನಿಂತಿದ್ದರು. ಇದು ಹೈಕಮಾಂಡ್ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿಯೇ ಅವರು ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಸತತ ಎರಡು ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಅಣ್ಣಾಮಲೈ ಮುಂದಿನ ಹೆಜ್ಜೆ ‘ಮಕ್ಕಳ್ ಶಕ್ತಿ ಇಯಕ್ಕಂ’
ಬಿಜೆಪಿಯಿಂದ ಹೊರಬಂದಿರುವ ಅಣ್ಣಾಮಲೈ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಸ್ವತಂತ್ರವಾಗಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಎಂಬ ಹೊಸ ಜನಪರ ಚಳವಳಿ ಅಥವಾ ರಾಜಕೀಯ ಸಂಘಟನೆಯನ್ನು ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಅಣ್ಣಾಮಲೈ ಕಡೆಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಇದೇ ವೇಳೆ ತಮಿಳುನಾಡಿನ ಕೊಯಮತ್ತೂರಿನಾದ್ಯಂತ ಅಣ್ಣಾಮಲೈ ಅವರ ಭಾವಚಿತ್ರವಿರುವ ಬೃಹತ್ ಪೋಸ್ಟರ್ಗಳು ಪ್ರತ್ಯಕ್ಷವಾಗಿವೆ. “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಕ್ರಾಂತಿಕಾರಿ ಸಂದೇಶವಿರುವ ಈ ಪೋಸ್ಟರ್ಗಳು, ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ ಎಂಬ ಬಲವಾದ ಸುಳಿವನ್ನು ನೀಡುತ್ತಿವೆ.
2021 ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ‘ಎನ್ ಮಣ್ಣ್, ಎನ್ ಮಕ್ಕಳ್’ ಪಾದಯಾತ್ರೆ ಮೂಲಕ ತಮಿಳುನಾಡಿನ ಮೂಲೆ ಮೂಲೆಗೂ ಬಿಜೆಪಿಯನ್ನು ತಲುಪಿಸಿದ್ದ ಜನಪ್ರಿಯ ನಾಯಕನೇ ಈಗ ಕೈಕೊಟ್ಟಿರುವುದು ಕಮಲ ಪಾಳೆಯಕ್ಕೆ ದಕ್ಷಿಣ ಭಾರತದಲ್ಲಿ ಚೇತರಿಸಿಕೊಳ್ಳಲಾಗದ ದೊಡ್ಡ ಆಘಾತವನ್ನು ನೀಡಿದೆ.
#AnnamalaiResigns #Annamalai #BJP #TamilNaduPolitics #NitinNabin #MakkalShaktiIyakkam #AnnamalaiQuitsBJP #BreakingNews #NationalPolitics #SinghamAnnamalai #FreedomTVKannada #Coimbatore #NDABreakup




