Top Newsದೇಶ/ವಿದೇಶರಾಜಕೀಯಸುದ್ದಿ

ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ; ಕೇಂದ್ರ ಸಚಿವರಿಗೆ ಕಂಪನದ ಅನುಭವ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಪ್ರಬಲ ಭೂಕಂಪದ ಅನುಭವವಾಗಿದೆ. ಮಧ್ಯಾಹ್ನ ಸುಮಾರು 1:22 ಗಂಟೆಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.4 ರಷ್ಟು ದಾಖಲಾಗಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ವರದಿಗಳ ಪ್ರಕಾರ, ಬಾಂಗ್ಲಾದೇಶದ ಢಾಕಾದ ಅಗರ್‌ಗಾಂವ್‌ನಲ್ಲಿರುವ ಭೂಕಂಪನ ಕೇಂದ್ರದಿಂದ ನೈಋತ್ಯಕ್ಕೆ ಸುಮಾರು 35 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಕಂಪದ ತೀವ್ರತೆಗೆ ಕೋಲ್ಕತ್ತಾದ ಬಹುಮಹಡಿ ಕಟ್ಟಡಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ. ಕಂಪನದ ಅನುಭವವಾಗುತ್ತಿದ್ದಂತೆಯೇ ಜನರು ಮನೆ ಮತ್ತು ಕಚೇರಿಗಳಿಂದ ಹೊರಬಂದು ರಸ್ತೆ ಹಾಗೂ ಬಯಲು ಪ್ರದೇಶಗಳಲ್ಲಿ ಜಮಾಯಿಸಿದರು. ಸೋಷಿಯಲ್ ಮೀಡಿಯಾಗಳಲ್ಲಿಯೂ ಅನೇಕರು ತಮ್ಮ ಮನೆಯ ಫ್ಯಾನ್‌ಗಳು ಮತ್ತು ಪೀಠೋಪಕರಣಗಳು ಜೋರಾಗಿ ಅಲುಗಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದೃಷ್ಟವಶಾತ್, ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ದೊಡ್ಡ ಮಟ್ಟದ ಹಾನಿಯಾದ ವರದಿಯಾಗಿಲ್ಲ.

ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ಈ ಭೂಕಂಪ ಸಂಭವಿಸಿದೆ. ವೇದಿಕೆಯು ಅಲುಗಾಡಲು ಪ್ರಾರಂಭಿಸಿದಾಗ ಕ್ಷಣಕಾಲ ದಿಕ್ಕಾಪಾಲಾದ ಸಚಿವರು, “ಏನಾಯಿತು? ಏನಾಯಿತು?” ಎಂದು ಸಭಿಕರನ್ನು ಪ್ರಶ್ನಿಸಿದರು. ಭೂಕಂಪ ಎಂಬುದು ಖಚಿತವಾದ ನಂತರವೂ ಅವರು ಧೈರ್ಯದಿಂದ ತಮ್ಮ ಭಾಷಣವನ್ನು ಮುಂದುವರಿಸಿದರು. ಬಾಂಗ್ಲಾದೇಶದ ಸತ್ಖಿರಾ ಜಿಲ್ಲೆಯಲ್ಲಿ ಈ ಭೂಕಂಪದ ಕೇಂದ್ರಬಿಂದು ಇತ್ತೆಂದು ವರದಿಯಾಗಿದ್ದು, ಗಡಿ ಭಾಗದ ಜಿಲ್ಲೆಗಳಲ್ಲೂ ತೀವ್ರ ಕಂಪನ ಉಂಟಾಗಿದೆ.

Comments (0)

Your email address will not be published. Required fields are marked *

Back to top button