ಕ್ವಾರಿ ಸದ್ದಿಗೆ ವರವಿನ ಮಲ್ಲೇಶ್ವರ ದೇವಸ್ಥಾನ ಅಲುಗಾಡ್ತಿದೆ!
Varavina Malleshwara temple will fall because of Quary blast

ಬಳ್ಳಾರಿ: ಕಲ್ಯಾಣ ಚಾಲುಕ್ಯರು ಹಾಗೂ ವಿಜಯನಗರ ಅರಸರ ಕಾಲದ ಭವ್ಯ ಇತಿಹಾಸ ಸಾರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಮಾರಕವೊಂದು ಈಗ ಗಣಿ ಧಣಿಗಳ ಹಣದ ಆಸೆಗೆ ಬಲಿಯಾಗುತ್ತಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ವರವಿನ ಮಲ್ಲೇಶ್ವರ ದೇವಸ್ಥಾನವು ಸುತ್ತಮುತ್ತ ನಡೆಯುತ್ತಿರುವ ಕಾನೂನುಬಾಹಿರ ಕಲ್ಲು ಗಣಿಗಾರಿಕೆ ಮತ್ತು ಭೀಕರ ಕ್ವಾರಿ ಬ್ಲಾಸ್ಟಿಂಗ್ನಿಂದಾಗಿ ಸಂಪೂರ್ಣ ಬಿರುಕು ಬಿಟ್ಟಿದ್ದು, ಅವಸಾನದ ಅಂಚಿಗೆ ತಲುಪಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಕಂಟಕವೇ ಸರಿ.

10ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಪವಿತ್ರ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ದಿನನಿತ್ಯ ಕ್ರಶರ್ ಹಾಗೂ ಕಲ್ಲು ಕ್ವಾರಿಗಳಿಗಳ ಧೂಳಿನಿಂದ ಅಭಿಶೇಕವಾಗುತ್ತಿದ್ದು, ಸ್ಫೋಟಕ ಸದ್ದು ಗಂಟಾನಾದವಾಗಿರುವುದು ದುಂಖಕರ ಸಂಗತಿಯಾಗಿದೆ.ಈ ಸ್ಫೋಟದ ತೀವ್ರತೆಗೆ ಇಡೀ ದೇವಸ್ಥಾನದ ಆವರಣವೇ ನಡುಗುತ್ತಿದ್ದು, ಲಕ್ಷಾಂತರ ಭಕ್ತರ ಆರಾಧ್ಯ ದೈವದ ಸನ್ನಿಧಿ ಬಿದ್ದು ಹೋಗುವ ಅತಂಕ ಸ್ಥಿತಿ ಎದುರಾಗಿದೆ.
ಧರಾಶಾಹಿ ಗರುಡಗಂಭ- ಬಿರುಕು ಬಿಟ್ಟ ಗೋಡೆಗಳು!
ನಿರಂತರವಾಗಿ ನಡೆಯುತ್ತಿರುವ ಜಿಲೆಟಿನ್ ಹಾಗೂ ಕಲ್ಲು ಕ್ವಾರಿ ಬ್ಲಾಸ್ಟಿಂಗ್ನ ಘರ್ಷಣೆಯಿಂದಾಗಿ ದೇವಸ್ಥಾನಕ್ಕೆ ಭಾರಿ ಹಾನಿಯಾಗಿದೆ.ದೇವಸ್ಥಾನದ ಐತಿಹಾಸಿಕ ಪೂರ್ವದ ದ್ವಾರಬಾಗಿಲು ಸಂಪೂರ್ಣ ಜಖಂಗೊಂಡಿದೆ.ಭಕ್ತರ ಶ್ರದ್ಧೆಯ ಸಂಕೇತವಾಗಿದ್ದ ಗರುಡಗಂಭ ಹಾಗೂ ಮುಖ್ಯ ದ್ವಾರದ ಭಾಗಗಳು ಸಂಪೂರ್ಣ ಹಾನಿಗೀಡಾಗಿವೆ.ದೇವಸ್ಥಾನದ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದ್ದರೂ, ಸ್ಫೋಟದ ಕಂಪನಕ್ಕೆ ಮುಖ್ಯ ಗೋಡೆಗಳು ದಿನದಿಂದ ದಿನಕ್ಕೆ ದೊಡ್ಡದಾಗಿ ಬಿರುಕು ಬಿಡುತ್ತಲೇ ಸಾಗಿವೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಅಧಿಕಾರಿಗಳು!
ಗಣಿ ದಂಧೆಗೆ ಹೆದರಿದ ಆಡಳಿತ ವ್ಯವಸ್ಥೆ ಕಣ್ಣೆದುರೇ ಇತಿಹಾಸ ಪ್ರಸಿದ್ಧ ಸ್ಮಾರಕ ನಲುಗಿ ಹೋಗುತ್ತಿದ್ದರೂ ಪುರಾತತ್ವ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸ್ಥಳೀಯ ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಗಣಿಗಾರಿಕೆ ಮಾಫಿಯಾ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಹಾಗೂ ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
“ನಮ್ಮ ಪೂರ್ವಜರು ಕಟ್ಟಿದ ಸಾಂಸ್ಕೃತಿಕ ಪರಂಪರೆಯನ್ನು ಕಲ್ಲು ಕ್ವಾರಿ ಮಾಲೀಕರು ಧ್ವಂಸ ಮಾಡುತ್ತಿದ್ದಾರೆ. ದೇವಸ್ಥಾನದ ಸುತ್ತ ನಡೆಯುತ್ತಿರುವ ಬ್ಲಾಸ್ಟಿಂಗ್ ಅನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ಈ ಐತಿಹಾಸಿಕ ಮಲ್ಲಯ್ಯನ ದೇವಸ್ಥಾನವನ್ನು ರಕ್ಷಿಸಬೇಕು” ಎಂದು ಭಕ್ತರು ಮತ್ತು ತೆಕ್ಕಲಕೋಟೆಯ ಗ್ರಾಮಸ್ಥರು ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
#BallariNews #Siruguppa #Tekkalakote #TempleInDanger #SaveHeritage #IllegalMining #QuarryBlasting #MalleshwaraTemple #KarnatakaTourism #KannadaNews #FreedomTV




