ದೆಹಲಿ: ಭಾರತ್ ಮಂಟಪಂನಲ್ಲಿ ನಡೆದ ‘ಇಂಡಿಯಾ ಎಐ ಶೃಂಗಸಭೆ’ಯ ವೇಳೆ ಯುವ ಕಾಂಗ್ರೆಸ್ ನಾಯಕರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮೀರತ್ನಲ್ಲಿ ನಡೆದ ಮೆಟ್ರೋ ರೈಲು ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿಗಳು, “ನೀವು ಈಗಾಗಲೇ ಜಗತ್ತಿನ ಮುಂದೆ ಬೆತ್ತಲಾಗಿದ್ದೀರಿ, ಮತ್ಯಾಕೆ ಬಟ್ಟೆ ಕಳಚಲು ಮುಂದಾದಿರಿ?” ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷವು ತಾತ್ವಿಕವಾಗಿ ದಿವಾಳಿಯಾಗಿದ್ದು, ನೀಚ ಮಟ್ಟದ ರಾಜಕಾರಣಕ್ಕೆ ಇಳಿದಿದೆ ಎಂದು ಕಿಡಿಕಾರಿದ್ದಾರೆ.
ದೇಶದ ಯಶಸ್ಸನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ , ಜಾಗತಿಕ ಮಟ್ಟದ ಪ್ರತಿಷ್ಠಿತ ಎಐ ಸಮಾವೇಶವನ್ನು ಕಾಂಗ್ರೆಸ್ ತನ್ನ ಕೊಳಕು ರಾಜಕೀಯಕ್ಕೆ ಬಳಸಿಕೊಂಡಿದೆ , ವಿಶ್ವವೇ ಭಾರತದತ್ತ ಗಮನ ಹರಿಸುತ್ತಿರುವಾಗ, ಇಂತಹ ಮಹತ್ವದ ದಿನದ ಘನತೆಗೆ ಕಾಂಗ್ರೆಸ್ ಕುಂದು ತಂದಿದೆ. ಇದು ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ, ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು ಎಂಬ ಕನಿಷ್ಠ ಜ್ಞಾನವೂ ವಿರೋಧ ಪಕ್ಷಕ್ಕಿಲ್ಲದಂತಾಗಿದೆ” ಎಂದು ಅವರು ಸಿಡಿಗುಟ್ಟಿದ್ದಾರೆ.
ಕಾಂಗ್ರೆಸ್ ನಾಯಕರು ವೈಯಕ್ತಿಕ ದ್ವೇಷದಿಂದ ತನ್ನ ತಾಯಿಯನ್ನು ಅವಮಾನಿಸಿದ್ದಾರೆ ಮತ್ತು ತನಗೆ ಸಮಾಧಿ ಕಟ್ಟಲು ಬಯಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಪ್ರಧಾನಿ, ಇಂತಹ ಭ್ರಷ್ಟ ಮತ್ತು ಸಂಸ್ಕಾರಹೀನ ನೀತಿಯನ್ನು ಇಡೀ ದೇಶವೇ ಖಂಡಿಸುತ್ತಿದೆ ಎಂದಿದ್ದಾರೆ. ಭಾರತದ ಪ್ರಗತಿಯನ್ನು ಜಾಗತಿಕ ವೇದಿಕೆಯಲ್ಲಿ ಹೀಗಳೆಯುವ ಕೆಲಸದಲ್ಲಿ ಕಾಂಗ್ರೆಸ್ ನಿರತವಾಗಿದೆ ಎಂದು ದೂರಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಎಐ ಶೃಂಗಸಭೆಯ ಸಂದರ್ಭದಲ್ಲಿ ಹತ್ತು ಮಂದಿ ಯುವ ಕಾಂಗ್ರೆಸ್ ನಾಯಕರು ಏಕಾಏಕಿ ಶರ್ಟ್ ಬಿಚ್ಚಿ ಸರ್ಕಾರ ಮತ್ತು ಅಂತರಾಷ್ಟ್ರೀಯ ನಾಯಕರ ವಿರುದ್ಧ ಘೋಷಣೆ ಕೂಗಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯು ಅಂತರಾಷ್ಟ್ರೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ತೀವ್ರ ಮುಜುಗರ ಉಂಟುಮಾಡಿತ್ತು. ಈ ವರ್ತನೆಯನ್ನು ಹಲವು ವಿರೋಧ ಪಕ್ಷದ ನಾಯಕರು ಕೂಡ ಅಸಮಾಧಾನದಿಂದ ನೋಡುತ್ತಿದ್ದಾರೆ.


