ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಸ್ಥಾನದಲ್ಲಿ ಇವರಿಬ್ಬರ ವಿವಾಹ ಫಿಕ್ಸ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಅವರ ಹಳೆಯ ಎಂಗೇಜ್ಮೆಂಟ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಕ್ಷಿತ್ ಶೆಟ್ಟಿ ಅವರ ಆಪ್ತ ಗೆಳೆಯ ಹಾಗೂ ನಟ ಪ್ರಮೋದ್ ಶೆಟ್ಟಿ ಅವರು ನೀಡಿದ ಪ್ರತಿಕ್ರಿಯೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಶ್ಮಿಕಾ ಮದುವೆ ಬಗ್ಗೆ ಮಾತನಾಡಿದ ಪ್ರಮೋದ್ ಶೆಟ್ಟಿ, “ಮದುವೆ ಇನ್ವಿಟೇಶನ್ ಬಂದರೆ ಖಂಡಿತ ಹೋಗುತ್ತೇನೆ. ಆದರೆ ಆ ಮದುವೆ ಕಾರ್ಡ್ ನಮಗೆ ಬರಲ್ಲ ಎಂಬುದು ನಿಮಗೂ ಗೊತ್ತು ನನಗೂ ಗೊತ್ತು” ಎಂದು ನೇರವಾಗಿಯೇ ನುಡಿದಿದ್ದಾರೆ. ಈ ಮೂಲಕ ಹಳೆಯ ಕಹಿ ಘಟನೆಗಳ ನಂತರ ರಶ್ಮಿಕಾ ಮತ್ತು ರಕ್ಷಿತ್ ತಂಡದ ನಡುವಿನ ಅಂತರ ಎಷ್ಟಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. ಈ ಹೇಳಿಕೆಯು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನು ರಕ್ಷಿತ್ ಶೆಟ್ಟಿ ಅವರ ಸದ್ಯದ ಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಖಡಕ್ ಆಗಿ ಉತ್ತರಿಸಿದ್ದಾರೆ. “ರಕ್ಷಿತ್ ಚಾಕ್ಲೆಟ್ ತಿನ್ನುವ ಚಿಕ್ಕ ಮಗುವಲ್ಲ, ಅವರು ಹಳೆಯ ವಿಷಯಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಸ್ತುತ ಹೊಸ ಸಿನಿಮಾ ಬರೆಯುವುದರಲ್ಲಿ ಬ್ಯುಸಿಯಾಗಿರುವ ರಕ್ಷಿತ್, ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬರುತ್ತಾರೆ ನೋಡ್ತಾ ಇರಿ” ಎಂದು ಗೆಳೆಯನ ಬೆನ್ನಿಗೆ ನಿಂತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಜೀವನಕ್ಕೆ ಅಡಿ ಇಡಲು ಸಿದ್ಧವಾಗುತ್ತಿದ್ದರೆ, ರಕ್ಷಿತ್ ಶೆಟ್ಟಿ ಮೌನವಾಗಿಯೇ ದೊಡ್ಡ ಸಿನಿಮಾದ ಸ್ಕೆಚ್ ಹಾಕುತ್ತಿದ್ದಾರೆ.


