
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ರೀತಿಯನ್ನು ಕೊಂಡಾಡಿರುವ ಅವರು, “ಸಿದ್ದರಾಮಯ್ಯ ಅವರ ಅವಶ್ಯಕತೆ ಇನ್ನೂ ನಮ್ಮ ಪಕ್ಷಕ್ಕೆ ಸಾಕಷ್ಟಿದೆ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರ ಆಶೀರ್ವಾದ ಇಲ್ಲದೇ ಕಾಂಗ್ರೆಸ್ ಪಕ್ಷ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ” ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಡಿಕೆಶಿ ನಿಷ್ಠೆಗೆ ಸಿಎಂ ಪಟ್ಟ!
ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರನ್ನು ಶ್ಲಾಘಿಸಿದ ಬಾಲಕೃಷ್ಣ, “ವಿರೋಧ ಪಕ್ಷಗಳು ಅಧಿಕಾರ ಹಸ್ತಾಂತರದ ವೇಳೆ ಸರ್ಕಾರ ಬೀಳಬಹುದು ಎಂದು ಆಸೆಯಿಂದ ಕಾಯುತ್ತಿದ್ದವು. ಆದರೆ ಹೈಕಮಾಂಡ್ ಹಾಗೂ ನಾಯಕರ ಪರಿಪಕ್ವತೆಯಿಂದ ವಿಪಕ್ಷಗಳಿಗೆ ತೀವ್ರ ನಿರಾಸೆಯಾಗಿದೆ” ಎಂದು ಕುಟುಕಿದರು. ಬಿಜೆಪಿ ಸರ್ಕಾರ ಎಷ್ಟೇ ಕಷ್ಟ ಕೊಟ್ಟರೂ, ಜೈಲಿಗೆ ಹಾಕಿದರೂ ಡಿಕೆಶಿ ಪಕ್ಷ ನಿಷ್ಠೆ ಬಿಡಲಿಲ್ಲ. ಹಿಂದೆ ದೇವೇಗೌಡರು ಹಾಗೂ ಬಿಜೆಪಿ ನಾಯಕರು ಸಿಎಂ, ಮಂತ್ರಿ ಆಫರ್ ಕೊಟ್ಟರೂ ಹೋಗದ ನಿಷ್ಠಾವಂತ ನಾಯಕ ನಮ್ಮ ಡಿ.ಕೆ.ಶಿವಕುಮಾರ್ ಎಂದು ಗುಣಗಾನ ಮಾಡಿದರು.
ಡಿಸಿಎಂ ಪದವಿಗಳು ಬೇಕೇ ಬೇಕು!
ಇದೇ ವೇಳೆ ಹೊಸ ಸರ್ಕಾರದ ರಚನೆ ಕುರಿತು ಮಾತನಾಡಿದ ಬಾಲಕೃಷ್ಣ, “ಹೊಸ ನಾಯಕತ್ವಕ್ಕೆ ಬೆಂಬಲ ನೀಡಲು ಹೊಸ ಸರ್ಕಾರದಲ್ಲಿ ಡಿಸಿಎಂ ಹುದ್ದೆಗಳು ಸೃಷ್ಟಿಯಾಗಬೇಕು. ಆದರೆ ಎಷ್ಟು ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ” ಎಂದರು. ಅಲ್ಲದೆ, ತಾವೂ ಕೂಡ 5 ಬಾರಿ ಶಾಸಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಹಿರಂಗವಾಗಿ ಇಚ್ಛೆ ವ್ಯಕ್ತಪಡಿಸಿದರು.
2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ- ಡಿಕೆ ಶಿವಕುಮಾರ್ ಅವರು ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ 40 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದ ತಾಳ್ಮೆಯಿಂದ ಕಾದಿದ್ದಕ್ಕೆ ಈ ಉನ್ನತ ಸ್ಥಾನ ಒಲಿದು ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜಂಟಿ ನಾಯಕತ್ವದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸಲೀಸಾಗಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೆಚ್.ಸಿ. ಬಾಲಕೃಷ್ಣ ಭವಿಷ್ಯ ನುಡಿದರು.
#FreedomTV #HCBalakrishna #Siddaramaiah #DKShivakumar #MallikarjunKharge #KarnatakaPolitics #CongressPowerShift #KarnatakaNewCM #MagadiMLA #CongressGovernment #CabinetExpansion #KarnatakaNews #BreakingNews #VokkaligaPolitics




