
ನವ ದೆಹಲಿ: ಸಿಬಿಎಸ್ಇ ಪರೀಕ್ಷೆಯ ಆನ್ಸ್ಕ್ರೀನ್ ಮಾರ್ಕಿಂಗ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳು ಮತ್ತು ಗೊಂದಲಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯ ಎಚ್ಚೆತ್ತುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಎಲ್ಲಾ ತಾಂತ್ರಿಕ ಲೋಪದೋಷಗಳ ಸಂಪೂರ್ಣ ಹೊಣೆಗಾರಿಕೆಯನ್ನು ತಾವೇ ವಹಿಸಿಕೊಂಡಿದ್ದು, ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

ನೂತನ ಡಿಜಿಟಲ್ ಮೌಲ್ಯಮಾಪನ ಸಭೆಯಲ್ಲಿ ಮಹತ್ವದ ನಡೆ!
ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಉನ್ನತಾಧಿಕಾರಿಗಳ ತುರ್ತು ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, ಮಂಡಳಿಯ ನೂತನ ಡಿಜಿಟಲ್ ಮೌಲ್ಯಮಾಪನ ಮಾದರಿಯಾದ ‘ಆನ್ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಯನ್ನು ಪರಾಮರ್ಶಿಸಿದರು. ಈ ಹೊಸ ತಂತ್ರಜ್ಞಾನದ ಪದ್ಧತಿಯಿಂದಾಗಿ ಮತ್ತು ಅದರಲ್ಲಿನ ಗೊಂದಲಗಳಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ತೀವ್ರ ಮಾನಸಿಕ ಒತ್ತಡ ಉಂಟಾಗಿರುವುದನ್ನು ಸಚಿವರು ಮುಕ್ತವಾಗಿ ಒಪ್ಪಿಕೊಂಡರು.
ದೂರು ಹಿನ್ನಲೆ, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ- ಪ್ರಧಾನ್!
ಪ್ರೋಟೋಕಾಲ್ನ ತಾಂತ್ರಿಕ ಸಮಸ್ಯೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ಗೊಂದಲ ಹಾಗೂ ಅಂಕಗಳ ಏರುಪೇರಿನ ಕುರಿತು ದೇಶಾದ್ಯಂತ ವಿದ್ಯಾರ್ಥಿಗಳಿಂದ ಸಾಲು ಸಾಲು ದೂರುಗಳು ಹರಿದು ಬಂದಿದ್ದವು. ಈ ಬಗ್ಗೆ ಕಠಿಣ ನಿಲುವು ತಳೆದಿರುವ ಸಚಿವರು, “ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ನಿರ್ಲಕ್ಷ್ಯ ಕಂಡುಬಂದರೂ ಸಹಿಸುವುದಿಲ್ಲ. ತಪ್ಪು ಮಾಡಿದವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಬಿಡುವುದಿಲ್ಲ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಕೇಂದ್ರ ಸಚಿವರ ಈ ತ್ವರಿತ ಪ್ರತಿಕ್ರಿಯೆ ಮತ್ತು ಜವಾಬ್ದಾರಿಯುತ ನಡೆ ಸದ್ಯ ಆತಂಕದಲ್ಲಿದ್ದ ಲಕ್ಷಾಂತರ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ದೊಡ್ಡ ನಿಮ್ಮಳ ತಂದಿದೆ.
#FreedomTV #DharmendraPradhan #CBSEBoard #OnScreenMarking #EducationMinistry #NewDelhiNews #CBSEError #DigitalEvaluation #StudentsFirst #TechnicalGlitch #NationalNews #EducationSystem #BreakingNewsIndia #ಕನ್ನಡಸುದ್ದಿ #ಸಿಬಿಎಸ್ಇ_ದೋಷ



