ಕೊಪ್ಪಳ: ಹಂದ್ರಾಳ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆದ ಘೋರ ಘಟನೆಯೊಂದು ಮನುಕುಲವನ್ನೇ ಬೆಚ್ಚಿಬೀಳಿಸಿದೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಂಗಿಯ ಪಾಲಿಗೆ ಮೃತ್ಯುವಿನಂತೆರಗಿ ಬಂದಿದ್ದಾನೆ. ಮನೆಯವರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದ ಗರ್ಭಿಣಿ ಸಹೋದರಿಯ ಮೇಲೆ ಅಣ್ಣ ಕೊಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿರುವುದು ಇಡೀ ಜಿಲ್ಲೆಯನ್ನು ಸ್ತಬ್ಧಗೊಳಿಸಿದೆ.
ಹಲ್ಲೆಗೊಳಗಾದ ಮೀನಾಕ್ಷಿ ಮತ್ತು ಉದಯಕುಮಾರ್ ಸುಮಾರು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಈ ದಂಪತಿಗಳು ಕೊಪ್ಪಳದಿಂದ ದೂರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ, ಇಂದು ಹಂದ್ರಾಳ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಮೀನಾಕ್ಷಿ ಆಗಮಿಸಿದ್ದಳು. ತಂಗಿ ಊರಿಗೆ ಬಂದಿರುವ ವಿಚಾರ ತಿಳಿದ ಅಣ್ಣ ಮಂಜುನಾಥ್, ಕುಡಿದ ಅಮಲಿನಲ್ಲಿ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾನೆ.
ಮಂಜುನಾಥ್ ತನ್ನ ತಂಗಿ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯೂ ಇಲ್ಲದೆ, ಕೊಡಲಿಯಿಂದ ಆಕೆಯ ತಲೆ, ಕೈ ಮತ್ತು ಬೆನ್ನಿನ ಭಾಗಕ್ಕೆ ಮನಸೋ ಇಚ್ಛೆ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೀನಾಕ್ಷಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಮ್ಮ ಸೊಸೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮಂಜುನಾಥ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ನಮಗೆ ನ್ಯಾಯ ಒದಗಿಸಬೇಕು ಎಂದು ಮೀನಾಕ್ಷಿಯ ಮಾವ ಶಂಕ್ರಪ್ಪ ಆಗ್ರಹಿಸಿದ್ದಾರೆ. ಒಡಹುಟ್ಟಿದವರ ನಡುವಿನ ಈ ರಕ್ತಸಿಕ್ತ ಸಂಘರ್ಷ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.


