Top Newsರಾಜಕೀಯರಾಜ್ಯಸುದ್ದಿ

ಮೂಡ ಹಗರಣದಲ್ಲಿ ಹೊಸ ಟ್ವಿಸ್ಟ್; ಆಡಿಯೋ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ತಮಗೆ ಹಣದ ಆಮಿಷ ಒಡ್ಡಲು ಸಂಚು ರೂಪಿಸಿದ್ದಾರೆಯೇ ಎಂಬ ಅನುಮಾನ ಮೂಡಿಸುವಂತಹ ಆಡಿಯೋ ತುಣುಕೊಂದನ್ನು ಬಿಡುಗಡೆ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಸದ್ಯಕ್ಕೆ ಕೇವಲ 6 ಸೆಕೆಂಡ್‌ಗಳ ಆಡಿಯೋವನ್ನು ಮಾತ್ರ ಬಹಿರಂಗಪಡಿಸಿದ್ದಾರೆ. ಈ ಆಡಿಯೋದಲ್ಲಿ “ಸ್ನೇಹಮಯಿ ಕೃಷ್ಣನನ್ನು ಏನಾದ್ರೂ ಲಿಂಕ್ ಹಿಡಿದು ಕನೆಕ್ಷನ್ ತಗೋಬೇಕಲ್ಲ ಒನ್ ಟು ಒನ್…” ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂಭಾಷಣೆಯು ಡಿ.ಬಿ. ನಟೇಶ್ ಮತ್ತು ಮೈಸೂರು ಮೂಲದ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾಗುತ್ತಿದ್ದು, ಇದು ಪ್ರಕರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

ತಮಗೆ ಆಮಿಷ ಒಡ್ಡಲು ಪ್ಲಾನ್ ಮಾಡಲಾಗುತ್ತಿತ್ತು ಎಂದು ಆರೋಪಿಸಿರುವ ಸ್ನೇಹಮಯಿ ಕೃಷ್ಣ, ಈ 6 ಸೆಕೆಂಡ್ ಆಡಿಯೋ ಕೇವಲ ಒಂದು ಸಣ್ಣ ತುಣುಕು ಮಾತ್ರ ಎಂದು ತಿಳಿಸಿದ್ದಾರೆ. ಈ ಪ್ರಕರಣದ ಸಂಪೂರ್ಣ ಆಡಿಯೋ ರೆಕಾರ್ಡಿಂಗ್ ಅನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಮುಡಾ ಹಗರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಈ ಬೆಳವಣಿಗೆಯಿಂದ ಮುಡಾ ಮಾಜಿ ಆಯುಕ್ತರಿಗೆ ಹೊಸ ಸಂಕಷ್ಟ ಎದುರಾಗುವ ಲಕ್ಷಣಗಳು ದಟ್ಟವಾಗಿವೆ. ಈ ಆಡಿಯೋ ಬಿಡುಗಡೆಯು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ತನಿಖಾ ಸಂಸ್ಥೆಗಳು ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button