ಸಂಪಾದಕೀಯ..

ಚಳವಳಿಗಳು ಸಾಮಾನ್ಯರನ್ನು ಅಸಾಮಾನ್ಯರಾಗಿ ಬೆಳೆಸುತ್ತವೆ. ಇದಕ್ಕೆ ಸಿದ್ದರಾಮಯ್ಯರೂ ಉದಾಹರಣೆ. ಸಮಾಜವಾದಿಗಳ ಪರಿಚಯ ಅವರನ್ನು ಸಿಎಂ ಆಗಿಸಿತು. ಲೋಹಿಯಾವಾದದ ಒಡಲಿಂದ ಹುಟ್ಟಿದ ಸಿದ್ದು, ನಂತರ ಅಹಿಂದ ವರ್ಗಗಳ ನೇತಾರರೆಂದು ಹೆಸರು ಮಾಡಿದ್ದಾರೆ.
ಸಿದ್ದು ಜಾತಿಯ ಹಂಗಿಗೆ ಬೀಳುತ್ತಿರಲಿಲ್ಲ. ತನ್ನವರ ಮೇಲೆ ಮತ್ತೊಬ್ಬ ಎರಗಿದರೆ ತಡೆಯುತ್ತಿರಲಿಲ್ಲ. ಯಾರೇ ತನ್ನ ಕ್ಯಾರೆಕ್ಟರ್ಗೆ ವಿರುದ್ಧ ಮಾತಾಡಿದರೆ ಸ್ಥಳದಲ್ಲೇ ಸಿಡಿಯುತ್ತಿದ್ದರು. ದೇವೇಗೌಡರ ಮನೆಯಂಗಳದಲ್ಲಿದ್ದೂ ಅವರನ್ನು ಗೌಡಿಕೆಯ ಗೂಟಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಮೊದಲ ಬಾರಿ ಸಿಎಂ ಆಗುವವರೆಗೂ ಅವರು ಎಂದೂ ಜಾತಿವಾದಿಯಾಗಿದ್ದೇ ಇಲ್ಲ. (ಎರಡನೇ ಟರ್ಮ್ನಲ್ಲಿ ಸಿದ್ದುಗೆ ಇದು ಅನನ್ವಯ).

ಇಂತಹ ಸಿದ್ದುಗೆ ಈಗ ವಯಸ್ಸಾಗಿದೆ. ವಯೋಸಹಜ ಕಾಯಿಲೆಗಳಿವೆ. ಕಣ್ಣು ಮಂಜು, ವಯೋಸಹಜ ಮರೆವು. ಜತೆಗೆ ಅವರ ಹಿಂದಿನ ವ್ಯಕ್ತಿತ್ವ ಕೂಡಾ ಮಾಸುತ್ತಿದೆ. ಸಿದ್ದು ತನ್ನದೇ ವ್ಯಕ್ತಿತ್ವಕ್ಕೆ ರಾಜಿ ಮಾಡಿಕೊಂಡಿದ್ದಾರೆ. ಇಂಥ ಹೊತ್ತಲ್ಲಿ, ಅವರು ಕಟ್ಟಿರುವ ಅಹಿಂದ ಎಂಬ ರಾಜಕೀಯ ಸಿದ್ಧಾಂತವನ್ನು ಸತೀಶ್ ಜಾರಕಿಹೊಳಿ ಮುನ್ನಡೆಸುತ್ತಾರೆ ಎಂಬ ಚರ್ಚೆ ಚಾಲ್ತಿಯಲ್ಲಿದೆ.ದಾವಣಗೆರೆಯಲ್ಲಿ ನ್ಯಾಯ ಕೇಳಿದ ಮುಸ್ಲಿಂ ಲೀಡರ್ಗಳನ್ನು ಉಚ್ಚಾಟಿಸುತ್ತಿರುವ ಕಾಂಗ್ರೆಸ್ ಹಿರಿತಲೆಗಳಿಗೆ ಸತೀಶ್ ಬಿನ್ನವತ್ತಳೆ ಸಲ್ಲಿಸಿದ್ದಾರೆ. ಮುಸ್ಲಿಂ ಲೀಡರ್ಸ್ ಪರ ನಿಂತು ಅಹಿಂದ ನೇತೃತ್ವದ ಕೆಲಸ ಶುರುಮಾಡಿದ್ದಾರೆ.
ಸಿದ್ದು ಚಳವಳಿಯ ಹಿನ್ನೆಲೆಯವರಾದರೆ, ಸತೀಶ್ ಹಿನ್ನೆಲೆಯೇ ಬೇರೆಯಿದೆ. ಎರಡು ಕುಟುಂಬಗಳ ದ್ವೇಷದ ನಡುವಿನಿಂದ ಹುಟ್ಟಿದ ಲೀಡರ್ ಸತೀಶ್. ಉದ್ಯಮಿಯಾಗಿ ಬೆಳೆದು, ಧನಿಕನಾಗಿ ನಂತರ ಆ ಭಾಗದ ಜಾತಿ ರಾಜಕಾರಣದಲ್ಲಿ ಹೇಗೆ ಉಳಿಯಬೇಕು ಎಂಬುದನ್ನು ಕರಗತ ಮಾಡಿಕೊಂಡವರು. ಬಳಿಕ ಅಂಬೇಡ್ಕರ್ ವಾದಿಯಾಗಿ ಹೆಸರು ಮಾಡುತ್ತಿರುವವರು.
ಕುಟುಂಬ ರಾಜಕಾರಣಿಯಾದ ಅವರು, ಹೆಲಿಕಾಪ್ಟರ್ ಸುತ್ತಾಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುತ್ತಾರೆ. ಮತ್ತೊಂದು ಆಘಾತಕಾರಿ ಮಾಹಿತಿ ಬಂದಿತ್ತು. ಕಳೆದ ವರ್ಷ ಗುತ್ತಿಗೆದಾರನೊಬ್ಬ ಎಂಜಿನಿಯರ್ಗಳಿಗೆ ಕಮಿಷನ್ ಕೊಡಲ್ಲ ಎಂದು ಜಗಳ ಮಾಡಿಕೊಂಡಿದ್ದ. ಆತನ ಮೇಲೆ ಸತೀಶ್ ಅವರ ಕಾರ್ಯದರ್ಶಿ ವಿಶೇಷ ತನಿಖೆ ಮಾಡಿಸಿದ್ದರು. ನಂತರ ನಡೆದ ಆಘಾತಕಾರಿ ಬೆಳವಣಿಗೆಯಲ್ಲಿ ಆ ಗುತ್ತಿಗೆದಾರನ ಪತ್ನಿಯನ್ನು ದಸ್ತಗಿರಿ ಮಾಡಿದ ಬೆಳವಣಿಗೆ ನಡೆದಿದೆ ಎಂದು ತಿಳಿದು ದಿಗ್ಭ್ರಾಂತನಾದೆ. ಲೋಕೋಪಯೋಗಿ ಇಲಾಖೆಯ ಈ ಸೇಡಿನ ಆಟ ಸತೀಶ್ಗೆ ಗೊತ್ತಾಗಿ ನಡೆಯಿತೋ ಗೊತ್ತಿಲ್ಲ..!ಉದ್ಯಮಪತಿಯೊಬ್ಬ ಎಂದಿಗೂ ಒಳ್ಳೆಯ ರಾಜಕಾರಣಿಯಾಗಲಾರ. ನೆಪೋಟಿಸಂ ಮಾಡುವ ವ್ಯಕ್ತಿ ಎಲ್ಲರನ್ನು ಸಮಾನವಾಗಿ ಕಾಣಲಾರ. ಅಧಿಕಾರವನ್ನು ವೈಯಕ್ತಿಕ ದ್ವೇಷಕ್ಕೆ ಬಳಸುವವ ಎಲ್ಲರ ಪ್ರೀತಿ ಗಳಿಸಲಾರ. ದ್ವೇಷ ಮೀರಿ ಉದಾರಿಯಾಗದ ವ್ಯಕ್ತಿ ಸಮಾಜಮುಖಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾರ ಎನ್ನುತ್ತಾರೆ.
ಏನೇ ಇರಲಿ, ಇರುವ ಅಹಿಂದ ಲೀಡರ್ ಗಳ ಪೈಕಿ ಇವರೇ ಒಕೆ ಎನಿಸಿಕೊಳ್ಳುತ್ತಿರುವ ಸತೀಶ್ ತನ್ನ ಮಿತಿಗಳನ್ನು ಮೀರಿ ಅಹಿಂದ ನಾಯಕರಾಗಿ ಬೆಳೆಯುತ್ತಾರಾ..? ಇದಕ್ಕೆ ಕಾಲವೇ ಉತ್ತರ ಕೊಡಬೇಕು.



