
ಬೆಂಗಳೂರು : ಕರ್ನಾಟಕ ರಾಜ್ಯಾದ್ಯಂತ ಪನ್ನೀರ್ ಹೆಸರಿನಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದ ಕೃತಕ ಪನ್ನೀರ್ ಬಳಕೆಯ ಮೇಲೆ ಆಹಾರ ಸುರಕ್ಷತಾ ಇಲಾಖೆಯು ಒಂದು ವರ್ಷದ ಅವಧಿಗೆ ನಿಷೇಧ ಹೇರಿ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಅಸಲಿ ಪನ್ನೀರ್ ಬದಲಿಗೆ ಸಸ್ಯಜನ್ಯ ಎಣ್ಣೆ ಹಾಗೂ ಕೊಬ್ಬಿನಾಂಶಗಳನ್ನು ಬಳಸಿ ತಯಾರಿಸಿದ ನಕಲಿ ಪನ್ನೀರ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಹೊರಡಿಸಲಾಗಿರುವ ಈ ಆದೇಶವು ರಾಜ್ಯಾದ್ಯಂತ ಮುಂದಿನ ಒಂದು ವರ್ಷದವರೆಗೆ ಜಾರಿಯಲ್ಲಿರಲಿದೆ.
ರಾಜ್ಯದಲ್ಲಿ ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್ ಅನ್ನು ತಯಾರಿಸುವುದು, ಸಂಗ್ರಹಿಸುವುದು, ಸಾಗಣೆ ಮಾಡುವುದು, ವಿತರಿಸುವುದು ಹಾಗೂ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಉತ್ಪಾದನಾ ಘಟಕಗಳೂ ಸಹ ಇದನ್ನು ಬಳಸುವಂತಿಲ್ಲ.
ಕರ್ನಾಟಕವು ಹಲವಾರು ಪನ್ನೀರ್ ಮಾದರಿಗಳನ್ನು ಪರೀಕ್ಷಿಸಿದ್ದು, ಯಾವುದೇ ಕಲಬೆರಕೆ ಇಲ್ಲ ಎಂದು ಕಂಡುಬಂದಿದೆ. ಪನ್ನೀರ್ನಲ್ಲಿ ಸಸ್ಯಜನ್ಯ ಎಣ್ಣೆ, ಕೊಬ್ಬು ಅಥವಾ ಇತರೆ ಡೈರಿ ಪದಾರ್ಥಗಳೊಂದಿಗೆ ಕಲಬೆರಕೆ ಇಲ್ಲದಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೃತಕ ಪನ್ನೀರ್ ಬಳಸಬಾರದು ಎಂದು ನಿಷೇಧ ಹೇರಲಾಗಿದೆ.




