BELAGAVIಕ್ರೈಂ ಸ್ಟೋರಿ

DYSP ಆಗಬೇಕಿದ್ದ ಇನ್ಸ್‌ಪೆಕ್ಟರ್ ಆತ್ಮಹತ್ಯೆ!

CPI commits Suicide in belagavi

ಬೆಳಗಾವಿ: ಮುಂದಿನ ತಿಂಗಳಷ್ಟೇ ಉನ್ನತ ಹುದ್ದೆಗೆ ಬಡ್ತಿ ಪಡೆದು ಸಮಾಜ ಸೇವೆಗೆ ಸಜ್ಜಾಗಬೇಕಿದ್ದ ದಕ್ಷ ಅಧಿಕಾರಿಯೊಬ್ಬರು ದಿಢೀರನೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ (CPI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್ ಚೌಗಲೆ (37) ಅವರು ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹ ಎದುರು ಕುಟುಂಬದ ಆಕ್ರಂದನ!


ಇಂದು ಬೆಳಿಗ್ಗೆ ಶ್ರೀಶೈಲ್ ಅವರು ತಮ್ಮ ಕೋಣೆಯ ಒಳ ಹೋಗಿ ಎಷ್ಟು ಸಮಯವಾದರೂ ಬಾಗಿಲು ತೆರೆದಿರಲಿಲ್ಲ. ಪತ್ನಿ ಎಷ್ಟೇ ಬಾರಿ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ತಕ್ಷಣವೇ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ರೂಮಿನ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ಶ್ರೀಶೈಲ್ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಕೆಳಗಿಳಿಸಿ ಬೆಳಗಾವಿ ಜಿಲ್ಲಾಸ್ಪತ್ರೆಗೆ (ಬಿಮ್ಸ್) ದಾಖಲಿಸಲಾಯಿತಾದರೂ, ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಡಿವೈಎಸ್ಪಿಯಾಗಬೇಕಿದ್ದವ ಮಸಣಕ್ಕೆ!
ಮೃತರ ಸಂಬಂಧಿ ಮಹೇಶ್ ಚೌಗಲೆ ಮಾಧ್ಯಮಗಳೊಂದಿಗೆ ಮಾತನಾಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಶ್ರೀಶೈಲ್ ಅತ್ಯಂತ ಪ್ರಾಮಾಣಿಕ ಮತ್ತು ಒಳ್ಳೆಯ ವ್ಯಕ್ತಿಯಾಗಿದ್ದರು. ಈ ಹಿಂದೆ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲೂ ಉತ್ತಮ ಸೇವೆ ಸಲ್ಲಿಸಿ ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಅತ್ಯಂತ ದುಃಖದ ಸಂಗತಿಯೆಂದರೆ, ಮುಂದಿನ ತಿಂಗಳಷ್ಟೇ ಅವರಿಗೆ ಡಿವೈಎಸ್ಪಿ (DySP) ಹುದ್ದೆಗೆ ಬಡ್ತಿ ಸಿಗಬೇಕಿತ್ತು. ಇಬ್ಬರು ಸಣ್ಣ ಮಕ್ಕಳಿದ್ದು, ಉಜ್ವಲ ಭವಿಷ್ಯ ಹೊಂದಿದ್ದ ನಾಯಕ ಹೀಗೆ ಅರ್ಧಕ್ಕೇ ಜಗತ್ತು ಬಿಟ್ಟು ಹೋಗಿರುವುದು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ” ಎಂದು ಕಣ್ಣೀರಿಟ್ಟಿದ್ದಾರೆ.
ಶ್ರೀಶೈಲ್ ಚೌಗಲೆ ಅವರು ಯಾವ ಕಾರಣಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಉದ್ಯಮಬಾಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ವೈಯಕ್ತಿಕ ಕಾರಣಗಳಿವೆಯೇ ಅಥವಾ ಇಲಾಖೆಯ ಒತ್ತಡವೇ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

#FreedomTV #Belagavi #SDRFCPI #ShrishailChougala #PoliceSuicide #BelagaviNews #BreakingNewsKarnataka #UdyambagPolice #BIMSBelagavi #SDRFKarnataka #CrimeNewsKarnataka #PoliceDepartment #ಕನ್ನಡಸುದ್ದಿ #ಬೆಳಗಾವಿ_ಸುದ್ದಿ

Comments (0)

Your email address will not be published. Required fields are marked *

Back to top button