
ಬೆಂಗಳೂರು: ದೇಶದ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಬಿಜೆಪಿ ಹೈಕಮಾಂಡ್ ತನ್ನ ತೀಕ್ಷ್ಣ ದೃಷ್ಟಿಯನ್ನು ಕರ್ನಾಟಕದ ಕಡೆಗೆ ನೆಟ್ಟಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಪ್ರಬಲ ಪ್ರತಿರೋಧ ತೋರಲು ಹಾಗೂ ಭವಿಷ್ಯದ ಚುನಾವಣೆಗಳಲ್ಲಿ ಶತಾಯಗತಾಯ ವಿಜಯಪತಾಕೆ ಹಾರಿಸಲು ದೆಹಲಿ ನಾಯಕರು ಭಾರಿ ಬದಲಾವಣೆಗೆ ಸಜ್ಜಾಗಿದ್ದಾರೆ. ಇದರ ಭಾಗವಾಗಿ ಕೇಂದ್ರ ವೀಕ್ಷಕರ ಸರಣಿ ಭೇಟಿ ಆರಂಭವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದ್ದು ವಿಜಯೇಂದ್ರರವರಿಗೆ ನಡುಕ ಉಂಟಾಗಿದೆ.

ಬೆಂಗಳೂರಿನಲ್ಲಿ ಬೇರೂರಿದ ಮೊದಲ ವೀಕ್ಷಕರ ತಂಡ!
ರಾಜ್ಯದಲ್ಲಿ ಎಸ್ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ವೀಕ್ಷಕರ ಮೊದಲ ತಂಡ ಈಗಾಗಲೇ ಬೆಂಗಳೂರಿಗೆ ಆಗಮಿಸಿದೆ.ಇದರೊಂದಿಗೆ ಪರ್ಯಾಯವಾಗಿ ಬಿಜೆಪಿಗೆ ಹೊಸ ಅಧ್ಯಕ್ಷನ ಹುಡುಕಾಟದಲ್ಲಿರುವ ಈ ತಂಡ ರಹಸ್ಯ ಅಭಿಪ್ರಾಯ ಸಂಗ್ರಹಣೆಯಲ್ಲಿ ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್,ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ * ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್,ಈ ಪ್ರಭಾವಿ ನಾಯಕರ ತಂಡವು ದಿನವಿಡೀ ರಾಜ್ಯ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿಯಾಗಿ ರಹಸ್ಯ ಅಭಿಪ್ರಾಯ ಸಂಗ್ರಹಣೆಯಲ್ಲಿ ಮುಂದಾದರು
ಬೆಂಗಳೂರಿಗೆ ನಿತಿನ್ ನಬಿನ್ -ಕಾರ್ಯಕರ್ತರಿಗೆ ಹೊಸ ‘ಟಾಸ್ಕ್’?
ಮೇ 23 ಮತ್ತು 24 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.ಮುಂಬರುವ ಮಹತ್ವದ ಚುನಾವಣೆಗಳನ್ನು ಎದುರಿಸಲು ನಾಯಕರು ಮತ್ತು ಕಾರ್ಯಕರ್ತರಿಗೆ ಹೈಕಮಾಂಡ್ ಸಿದ್ಧಪಡಿಸಿರುವ ಹೊಸ ‘ಟಾಸ್ಕ್’ ಹಾಗೂ ಕಾರ್ಯತಂತ್ರಗಳನ್ನು ಅವರು ಈ ಭೇಟಿಯಲ್ಲಿ ಹಸ್ತಾಂತರಿಸಲಿದ್ದಾರೆ ಎನ್ನಲಾಗಿದೆ.
ಮೇ 25ಕ್ಕೆ 2ನೇ ತಂಡ ಭೇಟಿ: ಹೊಸ ಅಧ್ಯಕ್ಷರ ಆಯ್ಕೆ!
ರಾಷ್ಟ್ರೀಯ ಅಧ್ಯಕ್ಷರ ಭೇಟಿಯ ಬೆನ್ನಲ್ಲೇ, ಮೇ 25 ರಂದು ಕೇಂದ್ರದ ಮತ್ತೊಂದು ಪ್ರಭಾವಿ ವೀಕ್ಷಕರ ತಂಡ ರಾಜ್ಯಕ್ಕೆ ಬರಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ತರುಣ್ ಚುಗ್ ಈ ತಂಡದಲ್ಲಿದ್ದು, ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ಹಂತದ ಕಸರತ್ತು ನಡೆಸಲಿದ್ದಾರೆ.ಈ ವರ್ಷದ ಅಂತ್ಯದ ವೇಳೆಗೆ ಸಂಘಟನಾ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
5 ವರ್ಷಗಳ ಬಳಿಕ ಕೋರ್ ಕಮಿಟಿ ಪುನರ್ರಚನೆ-ಅಧ್ಯಕ್ಷ ಸ್ಥಾನಕ್ಕಾಗಿ ಘಟಾನುಘಟಿಗಳ ಲಾಬಿ!
ರಾಜ್ಯಾಧ್ಯಕ್ಷರ ಆಯ್ಕೆಯ ಚರ್ಚೆಯ ನಡುವೆಯೇ, 2021 ರಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನರ್ರಚನೆ ವಿಚಾರ ಮತ್ತೆ ಮುಂಚೂಣಿಗೆ ಬಂದಿದೆ. ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷದಿಂದ ಹೊರನಡೆದ ನಂತರ ತೆರವಾಗಿರುವ ಪ್ರಮುಖ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಬಿಜೆಪಿಯ ಘಟಾನುಘಟಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ವಿ. ಸುನಿಲ್ ಕುಮಾರ್,ಶೋಭಾ ಕರಂದ್ಲಾಜೆ,ವಿ. ಸೋಮಣ್ಣ,ಜಗದೀಶ್ ಶೆಟ್ಟರ್ ಮುಂತಾದವರು ತಾ ಮುಂದು ನಾ ಮುಂದು ರೇಸಿನಲ್ಲಿದ್ದು ಕುತೂಹಲಕ್ಕೆ ಎಡೆಮಾಡಿದೆ.
ಒಟ್ಟಾರೆಯಾಗಿ, ಮುಂದಿನ ಒಂದು ವಾರದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಗಳು ಮತ್ತು ಹೈಕಮಾಂಡ್ ನಾಯಕರ ಸರಣಿ ಭೇಟಿಗಳು ಕರ್ನಾಟಕ ಬಿಜೆಪಿಯ ಮುಂದಿನ ಭವಿಷ್ಯ ಮತ್ತು ನಾಯಕತ್ವದ ದಿಸೆಯನ್ನು ಬದಲಿಸುವುದು ಪಕ್ಕಾ ಆದಂತಿದೆ.
#FreedomTV #KarnatakaBJP #BJPChanakyaNeeti #HighCommandMeeting #vijayendra #NitinNabin #RadhamohanDasAgarwal #CoreCommitteeShuffle #KarnatakaPolitics #BengaluruNews #PoliticalChanakya #BJPInKarnataka #KannadaNews #PoliticalUpdates




