
ಮಕ್ಕಳಿಗೆ ಆಸರೆಯಾದ ಕಾರಾಗೃಹ

ಬೆಂಗಳೂರು: ಪರಪ್ಪನ ಅಗ್ರಹಾರ ಸದಾ ಅಕ್ರಮಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಮತ್ತೊಮ್ಮೆ ಕೇಂದ್ರ ಕಾರಾಗೃಹ ಸುದ್ದಿ ಮಾಡಿದೆ. ಆದರೆ ಅಕ್ರಮದಿಂದಲ್ಲ; ಬದಲಾಗಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸುತ್ತಿರುವ ಕಾರಣದಿಂದ. ಹೌದು, ತಾಯಂದಿರು ಮಾಡಿದ ತಪ್ಪಿಗೆ ಅವರನ್ನೇ ಅವಲಂಬಿಸಿರುವ ಹಸುಗೂಸುಗಳು ಮತ್ತು ಆರು ವರ್ಷದೊಳಗಿನ ಮಕ್ಕಳು ಯಾವುದೇ ಅಪರಾಧ ಮಾಡದಿದ್ದರೂ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾದ ಅನಿವಾರ್ಯತೆ ಇದೆ. ಇಂತಹ ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಲು ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಿದೆ. ಈ ಕೇಂದ್ರ ಶೈಕ್ಷಣಿಕ ಮತ್ತು ಮಾನಸಿಕ ವಿಕಸನಕ್ಕೆ ಒತ್ತು ನೀಡಲಿದ್ದು, ಜೈಲಿನ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಇಲ್ಲಿ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಮಾತ್ರವಲ್ಲದೆ, ಅವರ ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಇಬ್ಬರು ವಿಶೇಷ ಶಿಕ್ಷಕರು ಇಲ್ಲಿ ಮಕ್ಕಳಿಗೆ ವರ್ಣಮಾಲೆ, ಗಣಿತ ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಕಲಿಸುತ್ತಿದ್ದಾರೆ. ಒಂಭತ್ತು ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದು, ಅದರಲ್ಲಿ ಮೂವರು ವಿದೇಶಿ ಮಕ್ಕಳು ಇದ್ದಾರೆ ಎನ್ನಲಾಗಿದೆ.
#ParappanaAgrahara #CentralJail #ChildCareCentre #BengaluruNews #KarnatakaPolice #ChildRights




