ಶಿಕ್ಷಕಿ ಜ್ಯೋತಿ ಕೊಲೆ ಪ್ರಕರಣ: 14 ಲಕ್ಷ ರೂ. ಸಾಲಕ್ಕಾಗಿ ಹತ್ಯೆಗೈದ ಆರೋಪಿ ಅಮರ್ ಬಂಧನ

ಕಲಬುರಗಿಯಲ್ಲಿ ನಡೆದ ಶಾಲಾ ಶಿಕ್ಷಕಿ ಜ್ಯೋತಿ ಅವರ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಪ್ರಮುಖ ಆರೋಪಿ ಅಮರ್ ಎಂಬಾತನನ್ನು ಬಂಧಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಜ್ಯೋತಿ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಣಕಾಸಿನ ವಿಚಾರವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಲಭ್ಯವಾದ ಪೆಟ್ರೋಲ್ ಬಂಕ್ವೊಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಅಮರ್ ಜ್ಯೋತಿಯವರನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದ್ದು, ಈ ಸುಳಿವು ಆರೋಪಿಯ ಬಂಧನಕ್ಕೆ ಹಾದಿ ಮಾಡಿಕೊಟ್ಟಿದೆ.
ವರದಿಗಳ ಪ್ರಕಾರ, ಆರೋಪಿ ಅಮರ್ ಶಿಕ್ಷಕಿ ಜ್ಯೋತಿಯವರಿಂದ ಸುಮಾರು 14 ಲಕ್ಷ ರೂಪಾಯಿ ಸಾಲ ಪಡೆದಿದ್ದನು ಎನ್ನಲಾಗಿದೆ. ಜ್ಯೋತಿ ಅವರು ತಾವು ನೀಡಿದ್ದ ಸಾಲದ ಹಣವನ್ನು ವಾಪಸ್ ನೀಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು, ಇದೇ ವಿಚಾರವಾಗಿ ಸಂಭವಿಸಿದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಅಮರ್ ಜ್ಯೋತಿಯವರನ್ನು ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದನು. ಅಲ್ಲದೆ, ಇವರಿಬ್ಬರ ನಡುವೆ ನೈತಿಕ ಸಂಬಂಧವಿತ್ತು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




