ಜಿಲ್ಲೆಸುದ್ದಿ

ಜ್ಯುವೆಲರಿ ಶಾಪ್ ದರೋಡೆ; 26 ಲಕ್ಷ ರೂ. ದೋಚಿದ್ದ ರಾಜಸ್ಥಾನಿ ಗ್ಯಾಂಗ್ ಅರೆಸ್ಟ್!

ತುಮಕೂರು: ತುಮಕೂರಿನಲ್ಲಿ ಹೊರರಾಜ್ಯದ ದರೋಡೆಕೋರರ ಗ್ಯಾಂಗ್ ಸಿನಿಮೀಯ ರೀತಿಯಲ್ಲಿ ಜ್ಯುವೆಲರಿ ಶಾಪ್ ದರೋಡೆ ಮಾಡಿ ಭೀತಿ ಸೃಷ್ಟಿಸಿದೆ. ಶಿರಾ ತಾಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ‘ಜಗತಾಂಭ’ ಜ್ಯುವೆಲರಿ ಶಾಪ್‌ಗೆ ನುಗ್ಗಿದ ನಾಲ್ವರು ಖದೀಮರು, ಮಾಲೀಕ ದಿನೇಶ್ ಮತ್ತು ಅವರ ಅಜ್ಜಿಯ ಮೇಲೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಸುಮಾರು 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ದರೋಡೆಕೋರರು ಮೂಲತಃ ರಾಜಸ್ಥಾನದವರಾಗಿದ್ದು, ಅರವಿಂದ್, ದುಂಗರ್ ಸಿಂಗ್, ಮಹೇಂದ್ರ ಸಿಂಗ್ ಮತ್ತು ಮಧು ಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಹೈವೇ ಪಕ್ಕದಲ್ಲಿರುವ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ಬೊಲೆರೋ ಕಾರಿನಲ್ಲಿ ಬಂದು ಹಾಡಹಗಲೇ ಈ ಕೃತ್ಯ ಎಸಗಿತ್ತು. 100 ಗ್ರಾಂ ಚಿನ್ನ ಹಾಗೂ ಒಂದೂವರೆ ಕೆಜಿ ಬೆಳ್ಳಿಯೊಂದಿಗೆ ಕಾಡಿನ ಪ್ರದೇಶಕ್ಕೆ ಪರಾರಿಯಾಗಿದ್ದರು.

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಶಿರಾ ಡಿವೈಎಸ್‌ಪಿ ಶೇಖರ್ ನೇತೃತ್ವದ ಪೊಲೀಸ್ ತಂಡವು ಕಾರು ಬೆನ್ನಟ್ಟಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಟೋಲ್ ಬಳಿ ಕಾರಿನ ಸುಳಿವು ಸಿಕ್ಕ ಬೆನ್ನಲ್ಲೇ ಆರೋಪಿಗಳನ್ನು ಚೇಸ್ ಮಾಡಿದ ಪೊಲೀಸರು, ಹುಯುಲು ದೊರೆ ಅರಣ್ಯ ಪ್ರದೇಶದಲ್ಲಿ ನಾಲ್ವರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕದ್ದ ಮಾಲನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದ್ದು, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button