
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ಸೂತ್ರದಡಿ ರಾಜೀನಾಮೆ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯನವರ ಪರವಾಗಿ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ತೊಗರಿ ನಾಡು ಕಲಬುರಗಿಯಲ್ಲಿ ಸಿದ್ದು ಅಭಿಮಾನಿಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸ್ ವಿಪಿ ವೃತ್ತದಲ್ಲಿ ರಸ್ತೆ ಬಂದ್ – ಮಾನವ ಸರಪಳಿ!
ಕಲಬುರಗಿ ನಗರದ ಪ್ರಮುಖ ಕೇಂದ್ರವಾದ ಎಸ್ವಿಪಿ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಕಾಂಗ್ರೆಸ್ ಹೈಕಮಾಂಡ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವೃತ್ತದ ಮಧ್ಯೆ ಬೃಹತ್ ಮಾನವ ಸರಪಳಿ ನಿರ್ಮಿಸಿದ ಅಭಿಮಾನಿಗಳು, ರಸ್ತೆ ತಡೆ ನಡೆಸಿ ದೆಹಲಿ ನಾಯಕರ ವಿರುದ್ಧ ಕಟುವಾದ ಘೋಷಣೆಗಳನ್ನು ಕೂಗಿದರು. ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಪಟ್ಟು ಹಿಡಿದರು.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿ !
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ನಾಯಕರು ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ಇಡೀ ರಾಜ್ಯದ ಶೋಷಿತರ ಧ್ವನಿಯಾಗಿರುವ ‘ಅಹಿಂದ’ ಕರುಳಿನ ಕುಡಿ. ಐದು ವರ್ಷಗಳ ಪೂರ್ಣಾವಧಿಗೆ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕಾಂಗ್ರೆಸ್ ಹೈಕಮಾಂಡ್ ಮುಕ್ತ ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ಒಂದು ವೇಳೆ ಹೈಕಮಾಂಡ್ ನಾಯಕರು ಒತ್ತಡ ತಂದು, ಸಿದ್ದರಾಮಯ್ಯ ಬಲವಂತದಿಂದ ರಾಜೀನಾಮೆ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಅಹಿಂದ ನಾಯಕನಿಗೆ ಅನ್ಯಾಯ ಮಾಡಿದರೆ ಮುಂಬರುವ ಪ್ರತಿಯೊಂದು ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳು ಮತ್ತು ಅಭಿಮಾನಿಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂಬ ಸ್ಪಷ್ಟಸಂದೇಶವನ್ನು ರವಾನಿಸಿದ್ದಾರೆ. ಸದ್ಯ ಕಲಬುರಗಿಯಲ್ಲಿ ಸಿದ್ದು ಅಭಿಮಾನಿಗಳ ಈ ಸಿಡಿತ ಕೈ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.
#FreedomTV #Siddaramaiah #KalaburagiProtest #SiddaramaiahFans #KurubaSangha #CongressHighCommand #SVPCircle #KarnatakaPolitics #SaveSiddaramaiah #AHINDA #PoliticalCrisis #KalaburagiNews #BreakingNewsKarnataka #ಕನ್ನಡಸುದ್ದಿ #ಕಲಬುರಗಿ_ಪ್ರತಿಭಟನೆ




