
ಬೆಂಗಳೂರು-ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ, ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭವಿಷ್ಯದ ರಾಜಕೀಯ ನಡೆ ಹಾಗೂ ಸಿದ್ಧಾಂತಗಳ ಬಗ್ಗೆ ಅತ್ಯಂತ ಸ್ಫೋಟಕ ಮತ್ತು ಭಾವುಕ ಹೇಳಿಕೆಗಳನ್ನು ನೀಡಿದ್ದಾರೆ. ತಮಗೆ ದೆಹಲಿ ಮಟ್ಟದಿಂದ ಬಂದಿದ್ದ ದೊಡ್ಡ ಆಫರ್ ಒಂದನ್ನು ತಾವು ವಿನಮ್ರವಾಗಿ ತಿರಸ್ಕರಿಸಿರುವುದಾಗಿ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಿ ಮಾತನಾಡಿದ ಸಿದ್ದರಾಮಯ್ಯ, “ನನಗೆ ಹೈಕಮಾಂಡ್ನಿಂದ ರಾಜ್ಯಸಭೆಗೆ ಹೋಗುವ ಮತ್ತು ರಾಷ್ಟ್ರ ರಾಜಕಾರಣಕ್ಕೆ ಬರುವ ದೊಡ್ಡ ಆಫರ್ ಬಂದಿತ್ತು. ಆದರೆ ನಾನು ಅದನ್ನು ವಿನಮ್ರವಾಗಿ ನಿರಾಕರಿಸಿದ್ದೇನೆ. ನನಗೆ ದೆಹಲಿ ರಾಜಕಾರಣದಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲ. ನನ್ನನ್ನು ಕರ್ನಾಟಕದ ಜನ ಐದು ವರ್ಷಗಳ ಕಾಲ ಆಯ್ಕೆ ಮಾಡಿದ್ದಾರೆ. ಅಲ್ಲಿಯವರೆಗೆ ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿದ್ದುಕೊಂಡು, ನನ್ನ ಕ್ಷೇತ್ರದ ಮತ್ತು ನಾಡಿನ ಜನರ ಪರವಾಗಿ ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಹಣ, ಆಸ್ತಿ ಹಿಂದೆ ಹೋದವನಲ್ಲ – ವಿಪಕ್ಷಗಳಿಗೆ ತಕ್ಕ ಪ್ರತ್ಯುತ್ತರ!
ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನ ತೆರೆದ ಪುಸ್ತಕ ಎಂದ ಸಿದ್ದರಾಮಯ್ಯ, ತಾವು ಯಾವತ್ತೂ ಮೌಲ್ಯ ಮತ್ತು ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿಲ್ಲ ಎಂದರು. “ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ವಿಪಕ್ಷಗಳು ಅಪಪ್ರಚಾರ ಮಾಡಿದ್ದವು. ಆದರೆ, ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ ಮೇಲೂ ಇಡೀ ದೇಶದಲ್ಲೇ ತಲಾ ಆದಾಯದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ” ಎಂದು ವಿಪಕ್ಷಗಳಿಗೆ ಚಾಟಿ ಬೀಸಿದರು. 2013 ಹಾಗೂ 2023ರ ಅವಧಿಯಲ್ಲಿ ತಾವು ನೀಡಿದ್ದ ನೂರಾರು ಭರವಸೆಗಳನ್ನು ಈಡೇರಿಸಿರುವುದಾಗಿ ಹೆಮ್ಮೆಯಿಂದ ನುಡಿದರು.
‘ಸಂವಿಧಾನ ಇಲ್ಲದಿದ್ದರೆ ನಾನು ಕುರಿ ಮೇಯಿಸಿಕೊಂಡಿರುತ್ತಿದ್ದೆ’ – ಕಣ್ಣೀರಿಟ್ಟ ನಾಯಕ!
ಸುದ್ದಿಗೋಷ್ಠಿಯ ಕೊನೆಯ ಹಂತದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ತತ್ವಗಳನ್ನು ನೆನೆಯುತ್ತಾ ಸಿದ್ದರಾಮಯ್ಯ ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದರು. ಗದ್ಗದಿತ ಕಂಠದಿಂದ ಮಾತನಾಡಿದ ಅವರು, “ನಾನು ಅತ್ಯಂತ ಸಾಮಾನ್ಯ ಹಳ್ಳಿಯಿಂದ ಬಂದವನು, ನನ್ನ ತಂದೆ-ತಾಯಿ ಅವಿದ್ಯಾವಂತರು. ಒಂದು ವೇಳೆ ಈ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ, ನಾನು ವಿದ್ಯಾವಂತನಾಗುತ್ತಿರಲಿಲ್ಲ, ಇಂತಹ ಉನ್ನತ ಹುದ್ದೆಗಳನ್ನೂ ಅಲಂಕರಿಸಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೊತ್ತಿಗೆ ನಾನು ಎಲ್ಲೋ ಕುರಿ ಮೇಯಿಸಿಕೊಂಡಿರುತ್ತಿದ್ದೆ!” ಎಂದು ಬಿಕ್ಕಿ ಬಿಕ್ಕಿ ಅತ್ತರು.
2006ರಲ್ಲಿ ತಮ್ಮ ಜೊತೆ ಕಾಂಗ್ರೆಸ್ ಸೇರಿದ 8 ಜನ ಶಾಸಕರನ್ನು ನೆನೆದು ತಾವು ಚಿರಋಣಿ ಎಂದ ಅವರು, “ನನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಸಂವಿಧಾನ ವಿರೋಧಿ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ” ಎಂದು ಸಿಂಹಗರ್ಜನೆ ಮಾಡಿದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಸಿದ್ದರಾಮಯ್ಯ ಅವರ ಈ ಭಾವುಕ ಮತ್ತು ಸಿದ್ಧಾಂತದ ಮಾತುಗಳು ಇಡೀ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ.
#FreedomTV #Siddaramaiah #SiddaramaiahPressMeet #RejectRajyaSabha #StatePolitics #KarnatakaPolitics #SiddaramaiahEmotional #AmbedkarConstitution #KrishnaHomeOffice #AntiCommunalFight #Annabhagya #GuaranteesSuccess #BengaluruNews #BreakingNewsKarnataka #ಕನ್ನಡಸುದ್ದಿ #ಸಿದ್ದರಾಮಯ್ಯ_ಸುದ್ದಿಗೋಷ್ಠಿ




