
ಕಲಬುರಗಿ: ಕಲ್ಯಾಣ ಕರ್ನಾಟಕದ ಜನತೆ ತಮ್ಮ ಮಕ್ಕಳನ್ನು ಕರೆದುಕೊಂಡು ಮೃಗಾಲಯ ವೀಕ್ಷಣೆಗೆ ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿಲ್ಲ. ಕಲಬುರಗಿ ಸಮೀಪದ ಮಾಡಬೂಳ್ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯವು ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಸುಮಾರು 43 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸುಂದರ ವನ್ಯಲೋಕದಲ್ಲಿ ವಿವಿಧ ಪ್ರಾಣಿಗಳು ಪಕ್ಷಿಗಳ ಕಲರವ ಕೇಳಿಬರುತ್ತಿದ್ದು ಪ್ರವಾಸಿಗರ ಸ್ವಾಗತಕ್ಕೆ ZOO ಸಜ್ಜಾಗಿದೆ.

ನೂತನ ಹೈಟೆಕ್ ಮೃಗಾಲಯ!
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಜಂಟಿಯಾಗಿ ಈ ಮೃಗಾಲಯವನ್ನು ಉದ್ಘಾಟಿಸಿದರು. KKRDB ಮಂಡಳಿಯು ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲಾಗಿದೆ. 29 ಕೋಟಿ ರೂ.ಮೃಗಾಲಯ ಪ್ರಾಧಿಕಾರ, 6 ಕೋಟಿ ರೂ.ಇನ್ಫೋಸಿಸ್ (ಸುಧಾಮೂರ್ತಿ ಟ್ರಸ್ಟ್) 3.20 ಕೋಟಿ ರೂಪಾಯಿ ಇನ್ನಿತರೆ ನೆರವಿನಿಂದ ಮೃಗಾಲಯ ಎದ್ದು ನಿಂತಿದೆ.
ಮೃಗಾಲಯದ ವ್ಯಾಪ್ತಿ!
ಮೃಗಾಲಯವು ಒಟ್ಟು ವಿಸ್ತೀರ್ಣ43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು 56ಕ್ಕೂ ಹೆಚ್ಚು ಪ್ರಾಣಿ ಪ್ರಭೇದಗಳು ಇಲ್ಲಿನ ಮುಖ್ಯ ಆಕರ್ಷಣೆ!ಬನ್ನೇರುಘಟ್ಟದಿಂದ ತಂದ ಎರಡು ಸಿಂಹಗಳು, ಮೊಸಳೆ, ನರಿ, ನವಿಲುಗಳನ್ನು ಇಲ್ಲಿ ಕಾಣಬಹುದು. ಇದು ರಾಜ್ಯದ 9ನೇ ಮೃಗಾಲಯಯಾಗಿದ್ದು ಇದರ ನಿರ್ವಹಣೆಯನ್ನು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವಹಿಸಿಕೊಂಡಿದೆ. ಮೃಗಾಲಯ ಸಾರ್ವಜನಿಕರ ವೀಕ್ಷಣೆಗಾಗಿ ಮೃಗಾಲಯದ ಆಡಳಿತ ಮಂಡಳಿಯು ಸಮಯ ಮತ್ತು ಟಿಕೆಟ್ ದರಗಳನ್ನು ರೂಪಿಸಿದ್ದು ವಿವರಗಳು ಕೆಳಕಂಡಂತಿವೆ.
| ವಿವರ | ಮಾಹಿತಿ |
| ವೀಕ್ಷಣೆಯ ಸಮಯ | ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ |
| ವಾರದ ರಜೆ | ಪ್ರತಿ ಮಂಗಳವಾರ |
| ಹಿರಿಯರು (12 ವರ್ಷ ಮೇಲ್ಪಟ್ಟವರು) | ₹ 75 |
| ಮಕ್ಕಳು (12 ವರ್ಷಕ್ಕಿಂತ ಕೆಳಗಿನವರು) | ₹ 40 |
| ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು | ₹ 25 (ವಿಶೇಷ ರಿಯಾಯಿತಿ) |
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ “ಕಲಬುರಗಿ ಭಾಗದ ಜನರಿಗೆ ಇದೊಂದು ದೊಡ್ಡ ಉಡುಗೊರೆ. ಈಗಾಗಲೇ ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪರೂಪದ ಪ್ರಾಣಿ-ಪಕ್ಷಿಗಳನ್ನು ಇಲ್ಲಿಗೆ ತರಿಸಲಾಗುವುದು. ಬಿಸಿಲೂರಿನ ಈ ಮೃಗಾಲಯದಿಂದ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡಲಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಒಟ್ಟಾರೆಯಾಗಿ, ಕಲ್ಯಾಣ ಕರ್ನಾಟಕದ ಜನತೆಗೆ ವೀಕೆಂಡ್ ಕಳೆಯಲು ಈಗ ಒಂದು ಸುಂದರ ತಾಣ ಸಿಕ್ಕಂತಾಗಿದೆ.
#FreedomTV #KalaburagiZoo #MadboolZoo #PriyankKharge #EshwarKhandre #KalyanaKarnataka #KalaburagiNews #KarnatakaZoo #Wildlife #NewZoo #TourismKarnataka #BreakingNewsKannada #ZooOpening #AnimalLovers #GulbargaZoo