
ಬೆಂಗಳೂರು: ದೇಶದಲ್ಲಿ ಕಳೆದ 11 ದಿನಗಳಲ್ಲಿ ನಾಲ್ಕು ಬಾರಿ ಇಂಧನ ದರ ಏರಿಕೆಯಾಗಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಅಧಿಕಾರಕ್ಕೆ ಬರುವ ಮುನ್ನ ‘ಅಚ್ಚೇ ದಿನ್’ ಹಾಗೂ ‘ಗುಜರಾತ್ ಮಾದರಿ’ ಭರವಸೆ ನೀಡಿದ್ದ ಮೋದಿ, ಇಂದು ದೇಶದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರನ್ನು ಲೂಟಿ ಮಾಡುತ್ತಿದ್ದಾರೆ” ಎಂದು ನೇರವಾಗಿ ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯುಪಿಎ ಅವಧಿಯ ಇಂಧನ ದರ ಹಾಗೂ ಪ್ರಸ್ತುತ ದರಗಳ ಅಂಕಿ-ಅಂಶಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮನಮೋಹನ್ ಅವಧಿ Vs ಮೋದಿ ಅವಧಿಯಲ್ಲಿ ತೈಲ ಬೆಲೆ
| ಇಂಧನ / ಗ್ಯಾಸ್ | ಮನಮೋಹನ್ ಸಿಂಗ್ ಅವಧಿ (ಯುಪಿಎ) | ಇಂದಿನ ದರ (ಮೋದಿ ಆಡಳಿತ) | ವ್ಯತ್ಯಾಸ / ಹೆಚ್ಚಳ |
| ಪೆಟ್ರೋಲ್ | ರೂ. 71.41 | ರೂ. 110.93 | ರೂ. 39.52 ಹೆಚ್ಚಳ |
| ಡೀಸೆಲ್ | ರೂ. 51.70 | ರೂ. 98.89 (ಅಂದಾಜು ರೂ. 100) | ರೂ. 47.19 ಹೆಚ್ಚಳ |
| ಎಲ್ಪಿಜಿ ಸಿಲಿಂಡರ್ | ರೂ. 412.00 | ರೂ. 915.50 | ರೂ. 503.50 ಹೆಚ್ಚಳ |
ಕಚ್ಚಾ ತೈಲ ಬೆಲೆ ಕಡಿಮೆ- ಆದ್ರೂ ತೈಲ ಬೆಲೆ ಜಾಸ್ತಿ!
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಆದರೂ ಅವರು ದೇಶದ ಜನರ ಮೇಲೆ ಭಾರ ಹಾಕದೆ ತೈಲ ದರವನ್ನು ನಿಯಂತ್ರಣದಲ್ಲಿಟ್ಟಿದ್ದರು. ಆದರೆ ಇಂದು ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 60 ರಿಂದ 70 ಡಾಲರ್ಗೆ ಕುಸಿದಿದ್ದರೂ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡುತ್ತಿಲ್ಲ. ಆ ಲಾಭದ ಹಣವನ್ನೆಲ್ಲ ಜನರಿಗೆ ಕೊಡುವ ಬದಲು ಕೇಂದ್ರ ಸರ್ಕಾರವೇ ಲೂಟಿ ಮಾಡುತ್ತಿದೆ” ಎಂದು ಸಿಎಂ ಗಂಭೀರ ಆರೋಪ ಮಾಡಿದರು.
ಮಾಧ್ಯಮದವರ ಕಾಲೆಳೆದ ಸಿಎಂ
“ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತದೆ. ನೀವು ಮಾಧ್ಯಮದವರೂ ಸಹ ಸ್ಕೂಟರ್ನಲ್ಲೇ ಓಡಾಡುತ್ತೀರ ತಾನೇ? ನಿಮಗೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಾಗಾಗಿ ಈ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಿ” ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಕಾಲೆಳೆದರು.
“ಅಂದು ಗುಜರಾತ್ ಸಿಎಂ ಆಗಿದ್ದ ಮೋದಿ ಇಂದು ಯಾಕೆ ಮೌನವಾಗಿದ್ದಾರೆ?””ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದರೂ ಅಂದು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಏನೆಲ್ಲಾ ಮಾತನಾಡಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಈಗ ಕೇವಲ 2 ವಾರಗಳಲ್ಲಿ ರೂ. 7.52 ರಷ್ಟು ಡೀಸೆಲ್ ದರ ಏರಿಕೆಯಾಗಿದೆ. ಈಗ ಮೋದಿ ಅವರು ಯಾಕೆ ಮೌನವಾಗಿದ್ದಾರೆ?” ಎಂದು ಪ್ರಶ್ನಿಸಿದ ಸಿಎಂ, ಈ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜನಸಾಮಾನ್ಯರ ಪರವಾಗಿ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.
#Siddaramaiah #FuelPriceHike #PetrolPriceToday #LPGPriceRise #PMModi #ManmohanSingh #Inflation #KarnatakaNews #FreedomTV #CommonManBurden #BengaluruNews



