Editorial

ಸಂಪಾದಕೀಯ…

ಸ್ವಾಮೀಜಿ ಯೊಬ್ಬರು ತಮ್ಮ ಜಟೆ-ಗೆರೆಗಳ ಹಿಂದೆ ಮಹಿಳೆಯೊಬ್ಬಳನ್ನು ಇಟ್ಟುಕೊಂಡು ಆಡಿದ್ದ ಗುಪ್ತ ಆಟ ಇದೀಗ ಬಯಲಾಗಿದೆ. ಈಗ ಆಕೆ ತಿರುಗಿಬಿದ್ದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ರಾಜಿ ಸಂಧಾನದಲ್ಲಿ ಶ್ರೀಗೆ ಹೊಡೆದಿದ್ದಾರೆ, ಜೀವನ ಭದ್ರತೆ ಎಂದು ದೊಡ್ಡ ಹಣ ಕೇಳುತ್ತಿದ್ದಾಳೆ. ಇದು ಕೇವಲ ಒಬ್ಬ ಗುರು-ಶಿಷ್ಯೆಯ ಗಲಾಟೆಯಲ್ಲ; ಇದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಒಂದು ಕೊಳಕು ರಾಜಕೀಯ ಬೇಟೆ. ಮೀಸಲಾತಿ ಹೋರಾಟದಲ್ಲಿ ಸಮುದಾಯವನ್ನು ಮುನ್ನಡೆಸಿದ್ದ ಈ ಸ್ವಾಮೀಜಿಯನ್ನು ಇನ್ನಿಲ್ಲದಂತೆ ಕಾಡುವ ರಾಜಕಾರಣಿಗಳು, ಮೀಡಿಯಾ ಹೈನಗಳು – ಎಲ್ಲರೂ ಶ್ರೀ ಪಾಲಿಗೆ ರಣಹದ್ದುಗಳಾಗಿದ್ದಾರೆ.

ಗುರು ದೇವರ ಸ್ಥಾನ ಎಂದು ಹೇಳಿಕೊಂಡು ಇಂದ್ರಿಯದಾಸನಾಗಿ ಭಕ್ತರ ನಂಬಿಕೆಯನ್ನು ತುಳಿದರೆ ಅದು ಧರ್ಮದ ಅಪಚಾರವಲ್ಲದೆ ಮತ್ತೇನು? ಒಂದು ಕಡೆ ಸ್ವಾಮೀಜಿ ತಮ್ಮ ತಪ್ಪನ್ನು ಒಪ್ಪದೆ ಮುಖ ಮರೆಸಿಕೊಳ್ಳುತ್ತಿದ್ದರೆ, ಮಹಿಳೆಯೂ ಹಲವು ವರ್ಷ ಗುಪ್ತವಾಗಿ ಸಂಬಂಧ ಬೆಳೆಸಿ ಈಗ ವಿಡಿಯೋ-ಆಡಿಯೋ ಬಿಟ್ಟು ಹಣದ ಗಾಳಿ ಹಿಡಿಯುತ್ತಿದ್ದಾಳೆ. ಎರಡೂ ಕಡೆಯೂ ನೈತಿಕತೆಯ ಬಟ್ಟೆ ಕಳಚಿಹೋಗಿದೆ. ಧರ್ಮದ ಹೆಸರಿನಲ್ಲಿ ಇಂತಹ ಕೊಳಕು ಒಡಂಬಡಿಕೆಗಳು ನಡೆದರೆ ಸಮಾಜದ ನಂಬಿಕೆ ಏನಾಗುತ್ತದೆ? ಕಲ್ಲು ಕರಗುವ ಸಮಯ ಬಂದಿದೆಯೇ?

ಕಾನೂನು ಎಲ್ಲಿ ಹೋಯಿತು? ಬ್ಲ್ಯಾಕ್‌ಮೇಲ್, ಹಲ್ಲೆ, ಬೆದರಿಕೆ – ಇವೆಲ್ಲಾ IPCಯ 384, 506, 420ರಡಿ ನೇರ ಅಪರಾಧ. ಆದರೆ ಯಾರೂ ಪೊಲೀಸ್ ಬಾಗಿಲು ತಟ್ಟದೆ ಖಾಸಗಿ ರಾಜಿ ಮಾಡಿ ಹಣದ ಮೂಲಕ ‘ಪರಿಹಾರ’ ಹುಡುಕುತ್ತಿದ್ದಾರೆ. ಇದು ಕಾನೂನಿನ ಗೇಲಿ ಅಲ್ಲದೆ ಮತ್ತೇನು? ಸಮಾಜ ಇದನ್ನು ಸುಮ್ಮನೆ ನೋಡಬೇಕೇ? ಎಲ್ಲರೂ ತಕ್ಷಣ ದೂರು ಕೊಟ್ಟು ಸತ್ಯವನ್ನು ಬೆಳಕಿಗೆ ತರಲಿ.

ಇದು ವೈಯಕ್ತಿಕ ವಿಷಯವಲ್ಲ – ಮೀಸಲಾತಿ ಹೋರಾಟದ ನಾಯಕನನ್ನು ಮುಗಿಸಲು ರಾಜಕಾರಣಿಗಳು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಸಮುದಾಯದ ನಾಯಕತ್ವವನ್ನು ದುರ್ಬಲಗೊಳಿಸಿ, ಏಕತೆಯನ್ನು ಒಡೆದು ತಮ್ಮ ರಾಜಕೀಯ ಲಾಭಕ್ಕೆ ಉಪಯೋಗಿಸುತ್ತಿದ್ದಾರೆ. ಹಲವರು’ಹೈನಗಳಂತೆ’ ಕಾದುಕೂತು ಹಲ್ಲು ಮಸೆಯುತ್ತಿದ್ದಾರೆ . ಇದು ಆ ಸಮಾಜದ ಏಕತೆಗೆ ಮಾಡುತ್ತಿರುವ ದೊಡ್ಡ ದ್ರೋಹ.
ಸ್ವಾಮೀಜಿ ತಕ್ಷಣ ಪೊಲೀಸ್‌ಗೆ ದೂರು ನೀಡಿ ಬ್ಲ್ಯಾಕ್‌ಮೇಲ್, ಹಲ್ಲೆ ಮತ್ತು ಬೆದರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪನ್ನು ಒಪ್ಪಿಕೊಂಡು ಭಕ್ತರ ಮುಂದೆ ಕ್ಷಮೆಕೇಳಬೇಕು. ಆ ಮಹಿಳೆಯೂ ತನಗೆ ನಿಜಕ್ಕೂ ಅನ್ಯಾಯ ಆಗಿದ್ದರೆ ಕಾನೂನಿನ ಮೊರೆಹೋಗಬೇಕೆ ಹೊರೆತು ಸೆಟಲ್ಮೆಂಟ್ ನ್ಯಾಯದ ಮೊರೆ ಹೋಗಬಾರದು.

ಫ್ರೀಡಂ ಟಿವಿ
(ಮಾರ್ಚ್ 07, 2026)

Comments (0)

Your email address will not be published. Required fields are marked *

Back to top button