Tuesday, February 24, 2026
19.8 C
Bengaluru
Google search engine
LIVE
ಮನೆHealthಬೆಂಗಳೂರಿಗರ ತಟ್ಟೆಯಲ್ಲಿ 'ಸ್ಲೋ ಪಾಯ್ಸನ್'; ಬದನೆಕಾಯಿಯಲ್ಲಿ 20 ಪಟ್ಟು ಹೆಚ್ಚು ಲೆಡ್ ಪತ್ತೆ!'

ಬೆಂಗಳೂರಿಗರ ತಟ್ಟೆಯಲ್ಲಿ ‘ಸ್ಲೋ ಪಾಯ್ಸನ್’; ಬದನೆಕಾಯಿಯಲ್ಲಿ 20 ಪಟ್ಟು ಹೆಚ್ಚು ಲೆಡ್ ಪತ್ತೆ!’

ಬೆಂಗಳೂರು:ತಾವು ಸೇವಿಸುತ್ತಿರುವ ಆಹಾರದ ಬಗ್ಗೆ ಬೆಚ್ಚಿಬೀಳುವಂತಹ ಮಾಹಿತಿಯೊಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಸಮಿತಿಯ ವರದಿಯಿಂದ ಬಹಿರಂಗವಾಗಿದೆ. ‘ಸಾವಯವ’ ಎಂಬ ಹಣೆಪಟ್ಟಿಯಡಿ ಮಾರಾಟವಾಗುತ್ತಿರುವ ತರಕಾರಿಗಳು ಸೇರಿದಂತೆ, ಮಾರುಕಟ್ಟೆಗೆ ಬರುತ್ತಿರುವ ಬಹುಪಾಲು ತರಕಾರಿಗಳಲ್ಲಿ ಅಪಾಯಕಾರಿ ಪ್ರಮಾಣದ ಸೀಸ ಮತ್ತು ನಿಷೇಧಿತ ಕೀಟನಾಶಕಗಳು ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದು ಕೇವಲ ತರಕಾರಿಯಲ್ಲ, ಬದಲಾಗಿ ತಟ್ಟೆಯಲ್ಲಿ ಬಡಿಸಲಾಗುತ್ತಿರುವ ‘ಸ್ಲೋ ಪಾಯ್ಸನ್’ ಎಂಬ ಕಟು ಸತ್ಯ ಬಯಲಾಗಿದೆ.

ನೆಲಮಂಗಲ, ರಾಜಾಜಿನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ 72 ಮಾದರಿಗಳ ಪೈಕಿ 19ರಲ್ಲಿ ನಿಗದಿತ ಮಿತಿಗಿಂತ ಅಧಿಕ ಸೀಸ ಪತ್ತೆಯಾಗಿದೆ. ಅದರಲ್ಲೂ ಬದನೆಕಾಯಿಯಲ್ಲಿ ಅನುಮತಿಸಲಾದ ಮಿತಿಗಿಂತ ಬರೋಬ್ಬರಿ 20 ಪಟ್ಟು ಹೆಚ್ಚು ಸೀಸದ ಅಂಶವಿರುವುದು ಪತ್ತೆಯಾಗಿದೆ. ವಿಪರ್ಯಾಸವೆಂದರೆ, ಹೆಚ್ಚು ಸುರಕ್ಷಿತವೆಂದು ನಂಬಿ ಖರೀದಿಸುವ ‘ಆರ್ಗ್ಯಾನಿಕ್’ ಬದನೆಕಾಯಿಯಲ್ಲೇ ಈ ವಿಷಕಾರಿ ಅಂಶದ ಪ್ರಮಾಣ ಹೆಚ್ಚಿರುವುದು ಜನಸಾಮಾನ್ಯರಿಗೆ ದೊಡ್ಡ ಶಾಕ್ ನೀಡಿದೆ. ಇದರೊಂದಿಗೆ ಮೆಣಸಿನಕಾಯಿ ಮತ್ತು ಸೌತೆಕಾಯಿಯಲ್ಲೂ ಅತಿಯಾದ ರಾಸಾಯನಿಕ ಅಂಶಗಳು ಕಂಡುಬಂದಿವೆ.

ಕೇವಲ ತರಕಾರಿ ಮಾತ್ರವಲ್ಲ, ಕರುನಾಡಿನ ಕೃಷಿ ಭೂಮಿಯೂ ಇಂದು ವಿಷಮಯವಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಭಾಗದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ದೋಷಪೂರಿತವಾಗಿವೆ ಎಂದು ವರದಿ ಹೇಳಿದೆ. ಭೂಮಿಯೇ ಮೆಟಲ್ ಮಾಲಿನ್ಯದಿಂದ ಕಲುಷಿತಗೊಂಡಿರುವುದರಿಂದ ಶುದ್ಧ ತರಕಾರಿ ಬೆಳೆಯುವುದು ಅಸಾಧ್ಯವಾಗಿದೆ. ಅಷ್ಟೇ ಅಲ್ಲದೆ, 2023ರಲ್ಲೇ ಭಾರತದಲ್ಲಿ ನಿಷೇಧಕ್ಕೊಳಗಾದ ‘ಮೊನೋಕ್ರೋಟೊಫೋಸ್’ನಂತಹ ಅಪಾಯಕಾರಿ ಕೀಟನಾಶಕಗಳು ಇಂದಿಗೂ ಅನಧಿಕೃತವಾಗಿ ಬಳಕೆಯಾಗುತ್ತಿರುವುದು ಈ ಮಾರಣಮೃದಂಗಕ್ಕೆ ಪ್ರಮುಖ ಕಾರಣವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments