2023ರ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅರ್ಷದ್ ಖಾನ್ನನ್ನು ರಾಷ್ಟ್ರೀಯ ತನಿಖಾ ದಳ ಯಶಸ್ವಿಯಾಗಿ ಬಂಧಿಸಿದೆ. ಈತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ಫೋಟದ ಮಾಸ್ಟರ್ ಮೈಂಡ್ ಜುನೈದ್ ಅಹ್ಮದ್ನ ಆಪ್ತ ಗೆಳೆಯನಾಗಿದ್ದು, ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನನ್ನು ಸೆರೆಹಿಡಿಯಲಾಗಿದೆ.
ಈ ಹಿಂದೆ ಸಿಸಿಬಿ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯ ವೇಳೆ ಅರ್ಷದ್ ಖಾನ್ನನ್ನು ಬಂಧಿಸಲಾಗಿತ್ತು. ನಂತರ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಪ್ರಕರಣದ ತನಿಖೆ ಎನ್ಐಎಗೆ ವರ್ಗಾವಣೆಯಾದ ಬಳಿಕ, ಈತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರೊಕ್ಲೋಮೇಷನ್ ವಾರೆಂಟ್ ಜಾರಿಯಾಗಿತ್ತು.
ಬಂಧಿತ ಶಂಕಿತ ಉಗ್ರ ಅರ್ಷದ್ ಖಾನ್, ಕುಕ್ಕರ್ ಬಾಂಬ್ ಸ್ಫೋಟದ ಸಂಚುಕೋರ ಜುನೈದ್ ಅಹ್ಮದ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಜುನೈದ್ ಸದ್ಯ ವಿದೇಶದಲ್ಲಿದ್ದುಕೊಂಡು ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್ ಹಾಕುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬಂಧಿತ ಅರ್ಷದ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನ ಜಾಲ ಮತ್ತು ಮುಂದಿನ ಸಂಚುಗಳ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


