ವೈರಲ್ ನ್ಯೂಸ್ಸುದ್ದಿ

ಡಾ. ವಿಷ್ಣುವರ್ಧನ್ ಬ್ಯಾನರ್‌ಗೆ ಅವಮಾನ;ಸಂಸ್ಕಾರ ಮರೆತ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ

ಕನ್ನಡ ಚಿತ್ರರಂಗದ ಧೀಮಂತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬ್ಯಾನರ್‌ಗೆ ಅಪಮಾನ ಮಾಡುವ ಮೂಲಕ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಉದ್ಧಟತನ ಮೆರೆದಿದ್ದಾರೆ. ಈ ಅಚಾತುರ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿದ್ಯಾರ್ಥಿಗಳ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕಾನೂನಿನ ಬಿಸಿ ಮುಟ್ಟಿದೆ.

ಬೆಂಗಳೂರಿನ ಖಾಸಗಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ವಿಷ್ಣುದಾದಾ ಅವರ ಬ್ಯಾನರ್ ಮುಂದೆ ನಿಂತು ಕೈಯಲ್ಲಿ ತಿಂಡಿ ತಿನ್ನುತ್ತಾ, ಅಸಭ್ಯವಾಗಿ ಬಾಯಿ ತೆರೆಯುವ ಸನ್ನೆಗಳನ್ನು ಮಾಡುವ ಮೂಲಕ ಅವಹೇಳನ ಮಾಡಿದ್ದರು. ಅಷ್ಟಕ್ಕೇ ನಿಲ್ಲದೆ, ಇದನ್ನು ದೊಡ್ಡ ಸಾಧನೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರು ನೀಡಿದ ಕೊಡುಗೆ ಮತ್ತು ಅವರ ವ್ಯಕ್ತಿತ್ವದ ಅರಿವಿಲ್ಲದ ಈ ವಿದ್ಯಾರ್ಥಿಗಳ ನಡೆಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಿಷ್ಣು ಅಭಿಮಾನಿಗಳು ಜೆ.ಪಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಿಡಿಯೋದಲ್ಲಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಯುವಕರಿಗೆ ಕಾನೂನಿನ ಅರಿವು ಮೂಡಿಸಿರುವ ಪೊಲೀಸರು, ಇಂತಹ ಕೃತ್ಯಗಳು ಮರುಕಳಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಂಸ್ಕಾರ ಮತ್ತು ಗೌರವದ ಪಾಠ ಕಲಿಯಬೇಕಾದ ವಿದ್ಯಾರ್ಥಿಗಳು, ನಾಡಿನ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಈ ರೀತಿ ನಡೆದುಕೊಳ್ಳುತ್ತಿರುವುದು ವಿಷಾದನೀಯ. “ವಿಷ್ಣುವರ್ಧನ್ ಅವರು ನಿಧನರಾದಾಗ ಇನ್ನು ಚಿಕ್ಕ ಮಕ್ಕಳಾಗಿದ್ದ ಇವರಿಗೆ ಅವರ ಘನತೆಯ ಬಗ್ಗೆ ಕನಿಷ್ಠ ಜ್ಞಾನವಿಲ್ಲ” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

Comments (0)

Your email address will not be published. Required fields are marked *

Back to top button