
ಮಂಡ್ಯ: ಮಂಡ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ವಿರುದ್ಧ ಕೇವಲವಾಗಿ ಮಾತನಾಡಿದ್ದಾರೆ ಎನ್ನಲಾದ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಸುರೇಶ್ ಗೌಡ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ದೇವೇಗೌಡರ ಕುಟುಂಬದ ಬಗ್ಗೆ ಇನ್ನು ಮುಂದೆ ನಾಲಿಗೆ ಬಿಟ್ಟರೆ ನಾಲಿಗೆ ಕತ್ತರಿಸುತ್ತೇವೆ” ಎಂದು ಮಂಡ್ಯದಲ್ಲಿ ಸುರೇಶ್ ಗೌಡ ನೇರ ಎಚ್ಚರಿಕೆ ನೀಡಿದ್ದಾರೆ.

ಯಾರ ಸಾವನ್ನು ಬಯಸ್ತಿದ್ದೀಯ ಚಲುವರಾಯಸ್ವಾಮಿ!
ಸುದ್ದಿಗೋಷ್ಠಿಯಲ್ಲಿ ಬೆಂಕಿ ಉಗುಳಿದ ಸುರೇಶ್ ಗೌಡ, “ಅಧಿಕಾರ, ಹಣದ ಮದ ಹಾಗೂ ದುರಹಂಕಾರದಿಂದ ಚಲುವರಾಯಸ್ವಾಮಿ ಬಹಳ ತಪ್ಪುಗಳನ್ನು ಮಾಡುತ್ತಿದ್ದಾರೆ. ಯಾರನ್ನೋ ಮೆಚ್ಚಿಸಲು ನಮ್ಮ ಸರ್ವೋಚ್ಚ ನಾಯಕರ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಬಂದಿದೆ ಎಂದು ಹೇಳಿದ್ದಾರೆ. ಸೂತಕ ಎನ್ನುವುದು ಕೇವಲ ಸಾವಿನ ಸಂದರ್ಭದಲ್ಲಿ ಮಾತ್ರ ಬರುತ್ತದೆ. ಹಾಗಾದರೆ ಚಲುವರಾಯಸ್ವಾಮಿ ದೇವೇಗೌಡರ ಮನೆಯಲ್ಲಿ ಯಾರ ಸಾವನ್ನು ಬಯಸುತ್ತಿದ್ದಾರೆ?” ಎಂದು ಆವೇಶದಿಂದ ಪ್ರಶ್ನಿಸಿದರು.
“ಕನ್ನಡನಾಡಿನಿಂದ ಯಾರಾದ್ರೂ ಪ್ರಧಾನಿ ಆಗಿದ್ರೆ ಅದು ಒಬ್ರೇ! ಹೆಚ್.ಡಿ. ದೇವೇಗೌಡರು. ಅವರ ಇತಿಹಾಸ ನಿಮಗೆ ಏನು ಗೊತ್ತು? ಎಸ್.ಎಂ. ಕೃಷ್ಣ ಅವರನ್ನು ಸಿಎಂ ಮಾಡಿದ್ದು ಯಾರು ಅನ್ನೋದು ನೆನಪಿರಲಿ. ನಿನ್ನ ಹತ್ತಿರ ಇವತ್ತು ಅಧಿಕಾರ ಇರಬಹುದು, ಆದರೆ ಜನರ ಶಕ್ತಿ ನಮ್ಮ ಹತ್ತಿರ ಇದೆ. ಅಧಿಕಾರ ಶಾಶ್ವತ ಅಲ್ಲ, ಚುನಾವಣೆ ಬಂದಾಗ ಜನರೇ ನಿನಗೆ ಬುದ್ಧಿ ಕಲಿಸುತ್ತಾರೆ.” ಎಂದು ಸುರೇಶ್ ಗೌಡ ಕಿಡಿಕಾರಿದರು.
ಕೇರಳದಲ್ಲಿ ಮಾಟ-ಮಂತ್ರ ಮಾಡಿಸ್ದಾ!
ಇದೇ ವೇಳೆ ಮಾಟ-ಮಂತ್ರದ ವಿಚಾರವನ್ನು ಪ್ರಸ್ತಾಪಿಸಿದ ಸುರೇಶ್ ಗೌಡ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದರು. “ಚಲುವರಾಯಸ್ವಾಮಿಗೆ ಯಾರ ಮನೆಯಲ್ಲಿ ಯಾರು ಸಾಯುತ್ತಾರೆ ಅನ್ನೋ ಮುನ್ಸೂಚನೆ ಮೊದಲೇ ಗೊತ್ತಾಗಿಬಿಡುತ್ತದೆ. ಯಾಕಂದ್ರೆ ಅವರು ಮಾಟ-ಮಂತ್ರ ಮಾಡಿಸುವುದರಲ್ಲಿ ಎತ್ತಿದ ಕೈ! ದೇವೇಗೌಡರ ಕುಟುಂಬಕ್ಕೆ ಕೆಟ್ಟದ್ದಾಗಲಿ ಎಂದು ಇವರು ಕೇರಳಕ್ಕೆ ಹೋಗಿ ಮಾಟ-ಮಂತ್ರ ಮಾಡಿಸಿಕೊಂಡು ಬಂದಿದ್ದಾರಾ? ನನ್ನ ಜೀವನದಲ್ಲಿ ನಾನು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಿದವನಲ್ಲ. ನನ್ನ ಮೇಲೂ ಇವರು ಮಾಟ-ಮಂತ್ರ ಮಾಡಿಸಿದ್ದಾರೆ, ಆದರೆ ನಾನು ಇದನ್ನು ನಂಬಲ್ಲ. ನಾವು ನಮ್ಮ ಶತ್ರುಗಳಿಗೂ ಎಂದಿಗೂ ಕೆಟ್ಟದ್ದನ್ನು ಬಯಸುವುದಿಲ್ಲ” ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಡೆದಿರುವ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಈಗ ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದಕ್ಕೆ ದೇವೇಗೌಡರಿಗೆ ಹೊಟ್ಟೆ ಉರಿ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಜೊತೆ ನಮ್ಮ ಎನ್ಡಿಎ (NDA) ಮೈತ್ರಿ ಸರ್ಕಾರವಿದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಮುಖ್ಯಮಂತ್ರಿಯಾದರೂ ನಾವು ವಿರೋಧಿಸುತ್ತೇವೆ.ಯಾಕಂದ್ರೆ ವಿರೋಧ ಪಕ್ಷದ ಕೆಲಸವೇ ಸರ್ಕಾರದ ವೈಫಲ್ಯಗಳನ್ನು ವಿರೋಧಿಸುವುದು. ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ 5 ವರ್ಷಕ್ಕೆ ಆಯ್ಕೆ ಮಾಡಿದ್ದಾರೆ, ಅವರು ಆಡಳಿತ ನಡೆಸಲಿ. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಹೇಗೆ ಕುಂಠಿತಗೊಂಡಿದೆ ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ” ಎಂದರು. ಒಟ್ಟಿನಲ್ಲಿ, ಮಂಡ್ಯ ಮಣ್ಣಿನ ಹಳೆ ವೈರಿಗಳಾದ ಚಲುವರಾಯಸ್ವಾಮಿ ಮತ್ತು ಸುರೇಶ್ ಗೌಡ ನಡುವಿನ ಈ ಹಸಿಬಿಸಿ ಜಟಾಪಟಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
#FreedomTV #SureshGowda #Chaluvarayaswamy #MandyaPolitics #HDDeveGowda #HDKumaraswamy #JDSVsCongress #MandyaNews #KarnatakaPolitics #DKShivakumarCM #WitchcraftAllegations #BlackMagicRow #BreakingNewsಕನ್ನಡ #PoliticalWar




