ದೆಹಲಿಯಲ್ಲಿ ಮತ್ತೆ ಚರ್ಚೆ.. ಡಿಸಿಎಂ ಆಗಲು ಸತೀಶ್ ಜಾರಕಿಹೊಳಿ ಕಸರತ್ತು!
Talks resume in Delhi... Satish Jarkiholi makes a bid for the Deputy CM post!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೆ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆ ಜೋರಾಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಹೈಕಮಾಂಡ್ ಹಂತದವರೆಗೆ ಚರ್ಚೆಗೆ ಬಂದಿದ್ದ ಎರಡು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ವಿಷಯ ಕಳೆದ ಕೆಲ ದಿನಗಳಿಂದ ತಣ್ಣಗಾಗಿತ್ತಾದರೂ ಇದೀಗ ಪುನಃ ದೆಹಲಿ ಹೈಕಮಾಂಡ್ ಅಂಗಳದಲ್ಲಿ ಚರ್ಚೆ ಶುರುವಾಗಿದೆ.
ಉತ್ತರ ಕರ್ನಾಟಕ ಭಾಗಕ್ಕೆ ಪ್ರಾದೇಶಿಕ ಪ್ರಾತಿನಿಧ್ಯ ಹಾಗೂ ಅಹಿಂದ ಮತಬ್ಯಾಂಕ್ ಬಲಪಡಿಸುವ ಉದ್ದೇಶದಿಂದ ಸತೀಶ್ ಜಾರಕಿಹೊಳಿ ಅವರು ಶತಾಯಗತಾಯ ಡಿಸಿಎಂ ಗದ್ದುಗೆ ಏರಲು ರಹಸ್ಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸ್ವಲ್ಪ ಕಾಲ ತಣ್ಣಗಾದಂತೆ ಕಾಣಿಸಿಕೊಂಡಿದ್ದ ಡಿಸಿಎಂ ಹುದ್ದೆಯ ರಾಜಕೀಯ ಕಹಳೆ, ಈಗ ಮತ್ತೆ ಮೊಳಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ನೀಡಿ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಈ ಚರ್ಚೆಗೆ ಕಾರಣವಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಅಥವಾ ಪ್ರಾತಿನಿಧ್ಯದ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ.
ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯವಾಗಿ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂಬ ಒತ್ತಡ ಹೈಕಮಾಂಡ್ ಮೇಲಿದೆ. ಈ ಭಾಗದ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಉನ್ನತ ಜವಾಬ್ದಾರಿ ನೀಡಬೇಕು ಎಂಬ ಕೂಗು ಅವರ ಬೆಂಬಲಿಗರಿಂದ ಕೇಳಿಬರುತ್ತಿದೆ. ಸತೀಶ್ ಜಾರಕಿಹೊಳಿ, ಈ ಬಾರಿ ಹೇಗಾದರೂ ಮಾಡಿ ಹೈಕಮಾಂಡ್ ಒಪ್ಪಿಸಿ ಡಿಸಿಎಂ ಪಟ್ಟಕ್ಕೇರಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ದೆಹಲಿ ಯಾತ್ರೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ರಾಜಕೀಯ ಸಂಚಲನ ಮೂಡಿಸಿವೆ. ಸಚಿವ ಸಂಪುಟ ಪುನಾರಚನೆಯ ಬಗ್ಗೆ ಹೈಕಮಾಂಡ್ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.




