bengaluruರಾಜ್ಯಸುದ್ದಿ

ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ: ಇಂದು ಮಧ್ಯರಾತ್ರಿ ಅದ್ಧೂರಿ ಶಕ್ತ್ಯೋತ್ಸವಕ್ಕೆ ಚಾಲನೆ

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ತಡರಾತ್ರಿ 12 ಗಂಟೆಗೆ ಈ ಅದ್ಧೂರಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಚೈತ್ರ ಪೂರ್ಣಿಮೆಯ ಈ ವಿಶೇಷ ದಿನದಂದು ನಡೆಯುವ ಕರಗ ಶಕ್ತ್ಯೋತ್ಸವಕ್ಕಾಗಿ ಜಿಬಿಎ, ಮುಜರಾಯಿ ಇಲಾಖೆ ಮತ್ತು ಬಿಬಿಎಂಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸುಮಾರು 15 ಲಕ್ಷಕ್ಕೂ ಅಧಿಕ ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಈ ಬಾರಿ ಸತತ 16ನೇ ಬಾರಿಗೆ ಪೂಜಾರಿ ಜ್ಞಾನೇಂದ್ರ ಅವರು ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ಕರಗವನ್ನು ಹೊರಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಇಂದು ಸಂಜೆ ಕಬ್ಬನ್ ಪಾರ್ಕ್‌ನ ಕರಗದ ಗುಂಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಭಕ್ತರಿಂದ ಸಾವಿರಾರು ಕೆಜಿ ಕರ್ಪೂರ ಸೇವೆಯ ಸಮರ್ಪಣೆ ನಡೆಯಲಿದೆ. ತದನಂತರ ತಾಯಿಯನ್ನು ಆಹ್ವಾನಿಸುವ ಶಾಸ್ತ್ರಗಳು ಮುಗಿದು, ತಡರಾತ್ರಿ ಭಕ್ತರಿಗೆ ಕರಗದ ದರ್ಶನ ಲಭ್ಯವಾಗಲಿದೆ. ಈ ಕರಗ ಉತ್ಸವವು ಕಬ್ಬನ್ ಪೇಟೆ, ರಾಜಾ ಮಾರ್ಕೆಟ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಮಸ್ತಾನ್ ಸಾಬ್ ದರ್ಗಾ ಹಾಗೂ ಅಣ್ಣಮ್ಮ ದೇವಸ್ಥಾನ ಸೇರಿದಂತೆ ಒಟ್ಟು 26 ದೇವಸ್ಥಾನಗಳ ಮಾರ್ಗವಾಗಿ ಸಂಚರಿಸಲಿದೆ. ನಾಳೆ ಬೆಳಗಿನ ಜಾವದ ವೇಳೆಗೆ ಕರಗವು ಪುನಃ ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ತಲುಪುವ ಮೂಲಕ ಈ ಸಾಂಪ್ರದಾಯಿಕ ಉತ್ಸವಕ್ಕೆ ತೆರೆ ಬೀಳಲಿದೆ. ಇಡೀ ಬೆಂಗಳೂರು ನಗರವು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದೆ.

Comments (0)

Your email address will not be published. Required fields are marked *

Back to top button