
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ವರ್ಷ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಆರ್ಸಿಬಿ ಆಡಳಿತ ಮಂಡಳಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ. 2025ರ ಜೂನ್ನಲ್ಲಿ ನಡೆದಿದ್ದ ಈ ದುರಂತದಲ್ಲಿ 11 ಅಮಾಯಕರು ಬಲಿಯಾಗಿದ್ದರು, ಈ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಆರ್ಸಿಬಿ ಮಂಡಳಿಯು ಹೈಕೋರ್ಟ್ ಮೆಟ್ಟಿಲೇರಿದೆ.
ಕ್ರೀಡಾಂಗಣದ ಒಳಭಾಗದ ಭದ್ರತೆ ಮತ್ತು ವ್ಯವಸ್ಥೆಗಳಿಗೆ ಮಾತ್ರ ನಮ್ಮ ಜವಾಬ್ದಾರಿ ಸೀಮಿತವಾಗಿದ್ದು, ಮೈದಾನದ ಹೊರಗೆ ಸಂಭವಿಸುವ ಯಾವುದೇ ಅಹಿತಕರ ಘಟನೆ ಅಥವಾ ಕಾಲ್ತುಳಿತಕ್ಕೆ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ವಾದವನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ.
ಒಂದೆಡೆ ಕಳೆದ ವರ್ಷದ ದುರಂತದ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಈ ಬಾರಿಯ ಐಪಿಎಲ್ ಹಬ್ಬಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗುತ್ತಿದೆ. ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದ್ದು, ಆರ್ಸಿಬಿ ತಂಡವು ತವರು ಮೈದಾನದಲ್ಲಿ ಒಟ್ಟು 5 ಪಂದ್ಯಗಳನ್ನು ಆಡಲು ಸಮ್ಮತಿ ಸೂಚಿಸಿದೆ. ಕಳೆದ ಬಾರಿಯ ಕಹಿ ಘಟನೆಗಳನ್ನು ಮರೆತು ಈ ಬಾರಿ ಅತ್ಯಂತ ಸುರಕ್ಷಿತವಾಗಿ ಪಂದ್ಯಗಳನ್ನು ಆಯೋಜಿಸಲು ಕೆಎಸ್ಸಿಎ ಅಧ್ಯಕ್ಷರು ಸನ್ನದ್ಧರಾಗಿದ್ದಾರೆ. ಪ್ರೇಕ್ಷಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಕೆಎಸ್ಸಿಎ ಭರವಸೆ ನೀಡಿದೆ.
ಹಳೆಯ ದುರಂತದ ಕಪ್ಪು ಚುಕ್ಕೆ ಮತ್ತು ಹೊಸ ಸರಣಿಯ ಸಂಭ್ರಮದ ನಡುವೆ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಈ ಬಾರಿಯ ಪಂದ್ಯಾವಳಿಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಆರ್ಸಿಬಿ ಮಂಡಳಿಯ ಪರವಾಗಿ ಬರುತ್ತದೆಯೇ ಅಥವಾ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೇ ಎಂಬುದು ಮಾರ್ಚ್ 16ರಂದು ತಿಳಿಯಲಿದೆ.




