Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop Newsನನ್ನ ಮಗನ್ನ ದಯಮಾಡಿ ಜೈಲಿಗೆ ಹಾಕಿ, ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ…! ಹೆತ್ತ ತಾಯಿಯ...

ನನ್ನ ಮಗನ್ನ ದಯಮಾಡಿ ಜೈಲಿಗೆ ಹಾಕಿ, ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ…! ಹೆತ್ತ ತಾಯಿಯ ಸಂಕಟದ ಮಾತು

ನನ್ನ ಮಗನ್ನ ದಯಮಾಡಿ ಜೈಲಿಗೆ ಹಾಕಿ ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ. ಡ್ರಗ್ ನಿಯಂತ್ರಣ ಮಾಡದ ಪೊಲೀಸರ ವಿರುದ್ದ ಡ್ರಗ್ ಅಡಿಟ್ ಹುಡಗನ ಹೆತ್ತ ತಾಯಿ ತನ್ನ ಮಗನನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತಲ್ಲ ಎಂದು ಅಸಹಾಯಕತೆಯಿಂದ ಒಡಲಾಳದ ನೋವನ್ನು ತೋಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುರವೇಕೆರೆಯಲ್ಲಿ ನಡೆದಿದೆ.

ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಕೈ ಕಾಲು ಮುರಿದು ಹಾಕ್ತಾರೆ. ಜನಗಳು ನಮ್ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ.  ಮರ‍್ಯಾದೆ ಹೋಗ್ತಾ ಇದೆ. ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ಇಲ್ಲಾಂದ್ರೆ ನನಗೆ ಅವನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ. ಇದು ಹೆತ್ತೊಡಲಿನ ಒಡಲಾಳದ ಮಾತು.

ಹೌದು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಇದು ತುರುವೇಕೆರೆ ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮರ ನೋವು. ತಮ್ಮ 20 ವರ್ಷ ವಯೋಮಾನದ ಮಗ ಅಭಿ ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದು ಕಲಿಯಬಾರದ ಚಟಗಳನ್ನೆಲ್ಲಾ ಕಲಿತಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ಇಂತಹ ಜಾಲಕ್ಕೆ ಬಿದ್ದು ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೇ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಇವರಿಗೆ ಮಾದಕ ವಸ್ತುಗಳನ್ನು ಸಪ್ಲೆ ಮಾಡುತ್ತಿರುವವರು ಯಾರು ಎಂಬುದನ್ನು ದಯಮಾಡಿ ಪತ್ತೆ ಹಚ್ಚಿ ಅಮಾಯಕರನ್ನು ಕಾಪಾಡಿ ಎಂದು ರೇಣುಕಮ್ಮ ಪೋಲಿಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅಭಿ ಅಲ್ಲಿದ್ದ ಕೆಲವು ಬಾಲಕಿಯರನ್ನು ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಹಿಡಿದು ಚನ್ನಾಗಿ ಥಳಿಸಿ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಇದೇ ಅಭಿ ಕಳೆದ ಮರ‍್ನಾಲ್ಕು ದಿನಗಳ ಹಿಂದೆ ಪಟ್ಟಣದಲ್ಲಿ ಯುವತಿಯೋಬ್ಬಳಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿತ್ತು. ಪೊಲೀಸರು ಅಭಿಯನ್ನು ಹುಡುಕುತ್ತಿದ್ದರು. ಈ ಮಧ್ಯೆ ಕಾಲೇಜಿನ ಕ್ರೀಡಾಂಗಣದಲ್ಲಿ ಮಾದಕ ವಸ್ತು ಸೇವಿಸಿದ್ದ ಅಭಿ ಕುಚೇಷ್ಠೆ ಮಾಡಿ ಜನರ ಕೈಗೆ ಸಿಕ್ಕಿ ಹಣ್ಣುಗಾಯಿ ನೀರುಗಾಯಿ ಆಗಿ ಪೊಲೀಸರ ಅತಿಥಿಯಾಗಿದ್ದ.

ಅಭಿಯ ತಾಯಿ ರೇಣುಕಮ್ಮ ತನ್ನ ಮಗ ಮಾದಕ ವಸ್ತುಗಳಿಗೆ ದಾಸನಾಗಿದ್ದಾನೆ. ಮನೆಯಲ್ಲಿ ಕೊಡಬಾರದ ಕಿರುಕುಳ ಕೊಡ್ತಾ ಇದ್ದಾನೆ. ಬೈಕ್ ಮತ್ತು ಮೊಬೈಲ್ ಬೇಕು ಅಂದ. ಕೊಡಿಸಲ್ಲ ಅಂದರೆ ಎಲ್ಲಿ ಕಳ್ಳತನ ಮಾಡ್ತಾನೋ?. ಏನು ಸಮಸ್ಯೆ ಮಾಡಿಕೊಳ್ತೋನೋ ಅಂತ ಹೆದರಿ ಸಾಲ ಮಾಡಿ ಬೈಕ್ ಮತ್ತು ಮೊಬೈಲ್ ಕೊಡಿಸಿದೆ. ಆದರೆ ಈಗ ಈ ಸಂಕಟ ತಂದಿಟ್ಟಿದ್ದಾನೆ ಎಂದು ರೇಣುಕಮ್ಮ ಅಳಲನ್ನು ಹೇಳಿಕೊಂಡಿದ್ದಾಳೆ.

ದಯಮಾಡಿ ನನ್ನ ಮಗನನ್ನು ಜೈಲಿಗೆ ಹಾಕಿಯಾದರೂ ಈ ದುಷ್ಚಟಗಳಿಂದ ದೂರ ಮಾಡಬೇಕು. ನನ್ನ ಮಗ ಹಾಳಾದ ರೀತಿಯಲ್ಲಿ ಇನ್ನೂ ಹಲವಾರು ಮಕ್ಕಳಿದ್ದಾರೆ. ಅವರನ್ನು ಈ ಪಾಪದ ಕೂಪದಿಂದ ಪಾರು ಮಾಡಬೇಕು ಎಂಬುದು ನನ್ನ ಆಸೆ. ಇಲ್ಲವೇ ನನ್ನ ಮಗನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ ನಾನು ಅವನನ್ನು ಸಾಯಿಸಿ ನಾನೂ ಸಾಯ್ತೀನಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪೊಲೀಸ್ ಠಾಣೆಗೆ ತೆರಳಿದ್ದ ತಾಯಿ ರೇಣುಕಮ್ಮಳಿಗೆ ಧೈರ್ಯ ತುಂಬಿದ ಸಬ್ ಇನ್ಸ್ ಪೆಕ್ಟರ್ ಪಾಂಡು, ಅಭಿ ಕೆಟ್ಟ ಸ್ನೇಹಿತರ ಸಹವಾಸದಿಂದ ಹಾಳಾಗಿದ್ದಾನೆ. ಅವನನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆ ತಾವು ಕೈ ಜೋಡಿಸುವುದಾಗಿ ಹೇಳಿದ್ದಾರೆ. ನಿಮ್ಹಾನ್ಸ್​​​​ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ತಾವು ನೆರವು ನೀಡುವುದಾಗಿ ರೇಣುಕಮ್ಮರಿಗೆ ಧೈರ್ಯ ತುಂಬಿದ್ದಾರೆ. ಸದ್ಯ ತುರುವೇಕೆರೆ ಪೊಲೀಸರು ಅಭಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments