ತುಮಕೂರು: ನಮ್ ಕುಟುಂಬದಲ್ಲಿ ಸಮಸ್ಯೆಯಿದೆ ಅಂತಾ ಹೆತ್ತ ತಾಯಿಯೇ ತನ್ನ ಇಬ್ಬರು ಚಿಕ್ಕಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕೆರೆಯ ಬಳಿ ಕರೆದೊಯ್ದು ಅವರನ್ನೂ ಕೆರೆಗೆ ತಳ್ಳಿ, ತಾನೂ ಕೆರಗೆ ಹಾರಿ ಸಾವಿಗೆ ಶರಣಾಗಿರುವ ದುರ್ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
ಮೃತರನ್ನು ಹಸೀನಾ ತಾಜ್ (35), ಅಫೀಜ್ (8), ಅಲ್ಕೀಜ್ (4) ಎಂದು ಗುರುತಿಸಲಾಗಿದೆ. ಈ ಘಟನೆ ಮಧುಗಿರಿ ತಾಲೂಕಿನ ಸಿದ್ದಪುರ ಕೆರೆಯಲ್ಲಿ ನಡೆದಿದೆ. ಹಸೀನಾ ತಾಜ್ ಮಧುಗಿರಿ ಪಟ್ಟಣದಲ್ಲಿ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದಳು. ಇಂದು ಮಧುಗಿರಿ ಬಳಿಯಿರುವ ಸಿದ್ದಪುರ ಕೆರೆಗೆ, ತನ್ನ ಇಬ್ಬರು ಮಕ್ಕಳ ಜೊತೆ ಕೆರೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಹಸೀನಾ ತಾಜ್ ಗಂಡನ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಕೆರೆಯ ಬಳಿ ಮಕ್ಕಳ ಶಾಲಾ ಬ್ಯಾಗ್ಗಳು ಲಭ್ಯವಾದ ಹಿನ್ನೆಲೆಯಲ್ಲಿ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಮಧುಗಿರಿ ಪೊಲೀಸರು ಪರಿಶೀಲನೆ ಮಾಡಿದ್ದು, ನಂತರ ಸ್ಥಳೀಯ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಕೆರೆಯಲ್ಲಿದ್ದ ಮೂವರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಈ ಘಟನೆ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.