ರಾಜ್ಯದಲ್ಲಿ ಒಟ್ಟು 2 ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಬೇಕಿತ್ತು.
52 ಲಕ್ಷ ವಾಹನಗಳಿಗೆ ಮಾತ್ರ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ
ಇನ್ನೂ 1.48 ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆ ಬಾಕಿ ಇದೆ
ಇದುವರೆಗೆ 4 ಬಾರಿ ಗಡುವು ವಿಸ್ತರಿಸಿದರೂ ವಾಹನ ಸವಾರರಿಂದ ನಿರಾಸಕ್ತಿ
ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ನೋದಣಿ ಫಲಕ ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಸೆ.16ರಿಂದ ಎಚ್ಎಸ್ಆರ್ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಎರಡು ಬಾರಿ ಮಾತ್ರ ದಂಡ ವಿಧಿಸಿ ಮೂರನೇ ಬಾರಿಗೆ ವಾಹನ ಜಪ್ತಿ ಮಾಡುವ ಕುರಿತು ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ 2019ರ ಏ.1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸುವುದು ಕಡ್ಡಾಯವಾಗಿದೆ. ಅದರಂತೆ ರಾಜ್ಯದಲ್ಲಿ 2 ಕೊಟಿ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕಿತ್ತು. 2023ರ ನವೆಂಬರ್ ತಿಂಗಳಲ್ಲಿಯೇ ಎಚ್ಎಸ್ಆರ್ಪಿ ಅಳವಡಿಕೆಗೆ ರಾಜ್ಯ ಸರ್ಕಾರ ಗಡುವು ನೀಡಿತ್ತು. ಆದರೆ ವಾಹನ ಮಾಲೀಕರು ಎಚ್ಎಸ್ಆರ್ಪಿ ಅಳವಡಿಕೆಗೆ ಆಸಕ್ತಿ ತೋರದ ಕಾರಣ 2024ರ ಫೆಬ್ರವರಿಗೆ ಗಡವು ವಿಸ್ತರಿಸಲಾಗಿತ್ತು. ಆದರೂ ಎಚ್ಎಸ್ಆರ್ಪಿ ಅಳವಡಿಕೆ ಪ್ರಮಾಣ ಹೆಚ್ಚಾಗದ ಕಾರಣ ಜುಲೈ ಹಾಗೂ ಸೆ.15ಕ್ಕೆ ಮತ್ತೆರಡು ಬಾರಿ ಗಡುವು ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿತ್ತು. ಹೀಗೆ ನಾಲ್ಕು ಬಾರಿ ಗಡುವು ವಿಸ್ತರಿಸಿದರೂ ಎಚ್ಎಸ್ಆರ್ಪಿ ಅಳವಡಿಸುವವರ ಸಂಖ್ಯೆ ಹೆಚ್ಚಳವಾಗಿಲ್ಲ. 2 ಕೋಟಿ ವಾಹನಗಳ ಪೈಕಿ ವಾಹನಗಳು ಮಾತ್ರ ಎಚ್ಎಸ್ಆರ್ಪಿ ಅಳವಡಿಸಿಕೊಂಡಿದ್ದು, ಇನ್ನೂ 1.48 ಕೋಟಿ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳುವುದು ಬಾಕಿಯಿದೆ. ಈಗಾಗಲೇ ನಾಲ್ಕು ಬಾರಿ ಗಡವು ವಿಸ್ತರಿಸುವುದರಿಂದ ಮತ್ತೊಮ್ಮೆ ಗಡವು ವಿಸ್ತರಿಸುವ ಸಾಧ್ಯತೆ ಕಡಿಮೆ.
ಸೆ.16ರಿಂದ ಎಚ್ಎಸ್ಆರ್ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅಲ್ಲದೆ, ಅದಕ್ಕಾಗಿ ಪ್ರತ್ಯೇಕ ತಂಡಗಳನ್ನೂ ರಚಿಸಲಾಗುತ್ತಿದೆ. ಸೋಮವಾರದಿಂದ ರಾಜ್ಯಾದ್ಯಂತ ವಾಹನಗಳ ತಪಾಸಣೆ ನಡೆಸಿ ಎಚ್ಎಸ್ಆರ್ಪಿ ಅಳವಡಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಮೊದಲ ಬಾರಿಗೆ 500 ರೂ. ಹಾಗೂ ಎರಡನೇ ಬಾರಿಗೆ 1 ಸಾವಿರ ರು. ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ. ಅದಾದ ನಂತರವೂ ಎಚ್ಎಸ್ಆರ್ಪಿ ಅಳವಡಿಸದಿದ್ದರೆ ಅಂತಹ ವಾಹನಗಳನ್ನು ಜಪ್ತಿ ಮಾಡುವುದಕ್ಕೂ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಕುರಿತು ಶೀಘ್ರದಲ್ಲಿ ಆದೇಶವನ್ನೂ ಹೊರಡಿಸಲಾಗುತ್ತದೆ.