Freedom TV

ಮನ್ಸೂರ್ ಅಲಿ ಖಾನ್ ಗೆ ಶಕ್ತಿ ತುಂಬಿದ ತೆಲಂಗಾಣ ಸಿಎಮ್ ರೇವಂತ ರೆಡ್ಡಿ

ಬೆಂಗಳೂರು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ರು.

ಪ್ರಚಾರದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿರುವ ರೇವಂತ್ ರೆಡ್ಡಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರು ಹಾಗೂ ಅವರ ಮಗನನ್ನು ಭ್ರಷ್ಟಾಚಾರದ ಮೇಲೆ ಜೈಲಿಗೆ ಕಳುಹಿಸುತ್ತೇನೆ ಎಂದು ವರ್ಷದ ಹಿಂದೆ ಮೋದಿ ಹೇಳಿದ್ದರು. ಆದರೆ ಈಗ ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿಯವರು ದೇವೇಗೌಡ ಕುಟುಂಬದ ಬಗ್ಗೆ ಹೇಳಿರುವುದನ್ನು ಮರೆತಿದ್ದಾರೆ. ಈಗ ಗಾಲಿ ಜನಾರ್ಧನ ರೆಡ್ಡಿಯವರೂ ಮೋದಿಯ ಪಕ್ಕ ಕೂತಿದ್ದಾರೆ. ಅದರ ಅರ್ಥ ಮೋದಿಯವರು ಹೇಳಿದ್ದನ್ನೂ ಯಾವುದೂ ಮಾಡುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು. ಕೇವಲ ಚುನಾವಣೆ ಗೆಲ್ಲಲು ಯೋಚನೆ ಮಾಡುತ್ತಾರೆಯೇ ಹೊರತು, ಕರ್ನಾಟಕ ಅಭಿವೃದ್ಧಿಗೆ ಏನನ್ನೂ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಗುಜರಾತಿನ ಏಳು ಸಂಸದರಿಗೆ ಸಂಪುಟ ಸಚಿವ ಸ್ಥಾನ ನೀಡಿದೆ. ಉತ್ತರ ಪ್ರದೇಶದ 18 ಸಂಸದರಿಗೆ ಸಂಪುಟ ಸ್ಥಾನ ನೀಡಿತ್ತು. ಆದರೆ, 25 ಸ್ಥಾನ ಗೆಲ್ಲಿಸಿ ಕೊಟ್ಟಿದ್ದ ಕರ್ನಾಟಕದಲ್ಲಿ ಪ್ರಹ್ಲಾದ್ ಜೋಷಿಗೆ ಮಾತ್ರ ಸಂಪುಟ ಸಚಿವ ಸ್ಥಾನ ನೀಡಿದೆ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಗುಜರಾತ್, ಉತ್ತರ ಪ್ರದೇಶದವರಿಗೆ ಕೇಂದ್ರ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕ, ತೆಲಂಗಾಣದವರಿಗೆ ಪ್ರಮುಖ ಖಾತೆಗಳನ್ನು ಏಕೆ ನೀಡುತ್ತಿಲ್ಲ?. ಗುಜರಾತ್, ಉತ್ತರ ಪ್ರದೇಶದಲ್ಲಿ ಮಾತ್ರ ಸಮರ್ಥ ನಾಯಕರಿರೋದಾ?. ಕರ್ನಾಟಕ, ತೆಲಂಗಾಣದಲ್ಲಿ ಸಮರ್ಥ ನಾಯಕರು ಇಲ್ವಾ?. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು.

ಈ ಲೋಕಸಭೆ ಚುನಾವಣೆ ಎರಡು ಪರಿವಾರದ ನಡುವಿನ ಯುದ್ಧ. ಮೋದಿ ನೇತೃತ್ವದ ಇವಿ ಮಷಿನ್, ಇಡಿ, ಐಟಿ, ಸಿಬಿಐ, ಅದಾನಿ, ಅಂಬಾನಿಯ ಒಂದು ಪರಿವಾರವಾಗಿದ್ದರೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ಮನ್ಸೂರ್ ಅಲಿ ಖಾನ್ ನಮ್ಮ ಪರಿವಾರವಾಗಿದೆ. ಈ ಎರಡು ಪರಿವಾರದ ನಡುವಿನ ಯುದ್ಧವಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಕಪ್ಪು ಹಣ ತರುತ್ತೇವ, 15 ಲಕ್ಷ ಹಣವನ್ನು ನಿಮ್ಮ ಖಾತೆಗೆ ಹಾಕುತ್ತೇವೆಂದು ಹೇಳಿದ್ದರು. ಹಾಕಿದ್ದಾರಾ..? ಒಂದು ಪೈಸೆಯೂ ಯಾರ ಖಾತೆಗೂ ಬಂದಿಲ್ಲ. ಕುಟುಂಬ ರಾಜಕೀಯದ ಬಗ್ಗೆ ಮೋದಿ ಮಾತನಾಡುತ್ತಾರೆ, ಆದರೆ ಯಡಿಯೂರಪ್ಪ ಮಗ ವಿಜಯೇಂದ್ರ ಪಕ್ಷದ ಅಧ್ಯಕ್ಷ, ಮತ್ತೊಬ್ಬರು ಸಂಸದರು. ರಾಜನಾಥ್ ಸಿಂಗ್ ಕೇಂದ್ರ ಸಚಿವ ಅವರ ಮಗ ಶಾಸಕ, ತೇಜಸ್ವಿ ಸೂರ್ಯ ಸಂಸದ, ಅವರ ಚಿಕ್ಕಪ್ಪ ಶಾಸಕರು, ನಿಮ್ಮ ಪಾರ್ಟಿಯಲ್ಲಿ ಇರುವವರೆಲ್ಲರೂ ಕುಟುಂಬ ರಾಜಕೀಯ ಮಾಡುವವರೇ ಆಗಿದ್ದಾರೆ.

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಿ ನುಡಿದಂತೆ ನಡೆದಿದೆ. ನುಡಿದಂತೆ ನಡೆದ ಕಾಂಗ್ರೆಸ್ಗೆ ಮತ ಹಾಕುತ್ತೀರಾ? ಇಲ್ಲ ನಂಬಿಸಿ ಮೋಸ ಮಾಡುವ ಮೋದಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದರು. ಇದೇ ವೇಳೆ ಮನ್ಸೂರ್ ಅವರನ್ನು ಆಯ್ಕೆ ಮಾಡುವಂತೆ ಜನತೆಗೆ ಕರೆ ನೀಡಿದರು.

ಇನ್ನೂ ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಮನ್ಸೂರ್ ಅಲಿ ಖಾನ್ ,ರೇವಂತ್ ರೆಡ್ಡಿಯವರು ನನಗೆ ಬೆಂಬಲಿಸಲು ಬಂದಿದ್ದಾರೆ.ತೆಲಂಗಾಣ ಚುನಾವಣೆಯನ್ನು ಅವರು ಚೆನ್ನಾಗಿ ನಡೆಸಿದ್ದರು.ಅದಕ್ಕೆ ಅವರಿಗೆ ಅಭಿನಂದನೆಗಳು.ನನಗೆ ಜನರ ಆಶೀರ್ವಾದ ಬೇಕು.ಕಾಂಗ್ರೆಸ್ ಪಕ್ಷ ಕೊಟ್ಟಷ್ಟು ಯೋಜನೆ ಬೇರೆ ಯಾರೂ ಕೊಟ್ಟಿಲ್ಲ.ಉಚಿತ ಬಸ್ ಕೊಡ್ತಿರೋದು ಮೂರೇ ರಾಜ್ಯದಲ್ಲಿ. ಅದ್ರಲ್ಲಿ ಕರ್ನಾಟಕವೂ ಒಂದು. 10 ತಿಂಗಳಲ್ಲಿ 5 ಗ್ಯಾರಂಟಿ ಕೊಟ್ಟು ದಾಖಲೆ ನಿರ್ಮಿಸಿದೆ. ಹೀಗಾಗಿ ನಮಗೆ ಮತವನ್ನು ನೀಡಿ ಆಶೀರ್ವದಿಸಿ ಎಂದು ಮನ್ಸೂರ್ ಅಲಿ ಖಾನ್ ಮನವಿ ಮಾಡಿದ್ರು.

Comments (0)

Your email address will not be published. Required fields are marked *

Back to top button