ರಾಮನಗರ : ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ತಾಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್ ಚಂದ್ರ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಧಿಕಾರಿಯು ಐಷಾರಮಿ ಜೀವನ ಕಂಡು ದಂಗಾಗಿದ್ದಾರೆ.
ಕರ್ತವ್ಯ ನಿಮಿತ್ತ ಅವರು ಬಿಡದಿ ಸಮೀಪದ ದುಬಾರಿ ಈಗಲ್ಟನ್ ರೆಸಾರ್ಟ್ನಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಾಗಿದ್ದರು. ಬೆಳಿಗ್ಗೆಯೇ ರೆಸಾರ್ಟ್ಗೆ ತೆರಳಿದ ಪೊಲಿಸರು ವಿಚಾರಣೆ ನಡೆಸಿದರು. ಮನೆ ಜೊತೆಗೆ ಕಚೇರಿಯನ್ನು ಪರಿಶೀಲಿಸಿ ದಾಖಲೆ ಹಾಗೂ ವಶಕ್ಕೆ ಪಡೆದಿದ್ದಾರೆ.
ಯತೀಶ್ ಅವರ ಮಾಸಿಕ ಸಂಬಳ ಮತ್ತು ರೆಸಾರ್ಟ್ನಲ್ಲಿ ಪಾವತಿಸುತ್ತಿರುವ ಬಾಡಿಗೆ ಮೊತ್ತದ ನಡುವಣ ವ್ಯತ್ಯಾಸ ಪರಿಶೀಲಿಸಲಾಗುತ್ತಿದೆ. ಯತೀಶ್ ಅವರ ಇತರ ಆದಾಯದ ಮೂಲಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಯತೀಶ್ ಸಹೋದ್ಯೋಗಿಯಾಗಿರುವ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಪಿಡಿಒ ಒಬ್ಬರ ಚನ್ನಪಟ್ಟಣದಲ್ಲಿರುವ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಟ್ಯಾಂತರ ರೂಪಾಯಿ ಅವ್ಯವಹಾರ : ಪಂಚಾಯಿತಿಯಲ್ಲಿ ವಾರ್ಷಿಕ ಸುಮಾರು ₹ 60 ಕೋಟಿ ತೆರಿಗೆ ವಸೂಲಿಯಾಗುತ್ತದೆ. ಈ ಹಣವನ್ನು ಯತೀಶ್ ದುರುಪಯೋಗ ಮಾಡಿಕೊಂಡಿದ್ದಾರೆ. ಕುಡಿಯುವ ನೀರು ಸಾಮಾಗ್ರಿ ಖರೀದಿಯಲ್ಲಿ ಅಕ್ರಮ, ಲೇಔಟ್ ಮಾಡದ ಜಾಗಕ್ಕೆ ಇ – ಖಾತೆ ನೀಡುವುದು ಸೇರಿದಂತೆ ಹಲವು ಅವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.
ಯತೀಶ್ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಕುರಿತು ತಾಲೂಕು ಪಂಚಾಯಿತಿ ಇ.ಒ ಮತ್ತು ಜಿಲ್ಲಾಪಂಚಾಯಿತಿ ಸಿಇಒ ಅವರಿಗೆ ಸೂರು ಕೊಟ್ಟಿದ್ದೆ. ಆದರೆ ಇಬ್ಬರೂ ಕ್ರಮ ಕೈಗೊಳ್ಳಲಿಲ್ಲ. ಕಡೆಗೆ ಲೋಕಾಯುಕ್ತಕ್ಕೆ ಸೂರು ಕೊಟ್ಟಿದ್ದೆ ಪೊಲೀಸರೇ ದಾಳಿ ನಡೆಸಿದ್ದಾರೆ ಎಂದರು.
ಮನೆಯಲ್ಲಿ ₹ 2.23 ಕೋಟಿ ಆಸ್ತಿ ಪತ್ತೆ : ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಪಿಡಿಒ ಯತೀಶ್ ಅವರ ಇಲ್ಲಿನ ರಾಘವೇಂದ್ರ ನಗರದ ಮನೆ ಮೇಲೆ ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹ 2.23 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಯತೀಶ್ ಅವರ ಬಳಿ ₹ 1.16 ಕೋಟಿ ಮೌಲ್ಯದ 4 ನಿವೇಶನಗಳಿದ್ದು, 2 ನಿವೇಶನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಮನೆಯೊಂದರ ಮೌಲ್ಯ ₹ 92 ಲಕ್ಷವಾಗಿದೆ.
ಚರಾಸ್ತಿಯಲ್ಲಿ ₹ 5. 31 ಲಕ್ಷ ನಗದು, ₹24.83 ಲಕ್ಷ ಮೌಲ್ಯದ 448 ಗ್ರಾಂ ಚಿನ್ನ, ₹ 71.800 ಮೌಲ್ಯದ 415 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ₹ 22.98 ಲಕ್ಷ ಮೌಲ್ಯದ ವಾಹನಗಳು ಹಾಗೂ ₹ 39.59 ಲಕ್ಷ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.