
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂತೆಗೆತದ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಯವರಿಗೆ ಸಮಾಜವನ್ನು ಉದ್ಧರಿಸುವ ಆಸಕ್ತಿಯಿಲ್ಲ.ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಅವರ ಮುಖ್ಯ ಉದ್ದೇಶ ” ಎಂದು ವಾಗ್ದಾಳಿ ನಡೆಸಿದ್ದಾರೆ.

ಧಾರ್ಮಿಕ ಆಚರಣೆಗೆ ಗೌರವ- ಸಂವಿಧಾನ ಬದ್ಧ ಹಕ್ಕು
ಬಿಜೆಪಿ ನಾಯಕರ ಆರೋಪಗಳಿಗೆ ಉತ್ತರಿಸಿದ ಸಚಿವರು, “ಬಿಜೆಪಿಯವರು ಮೊದಲು ಸರ್ಕಾರದ ಆದೇಶವನ್ನು ಸರಿಯಾಗಿ ಓದಲಿ. ಸಂವಿಧಾನದಲ್ಲಿ ಪ್ರತಿ ಧರ್ಮದವರಿಗೂ ಅವರದ್ದೇ ಆದ ಸಂಪ್ರದಾಯ ಮತ್ತು ಆಚರಣೆಗಳನ್ನು ಪಾಲಿಸಲು ಅವಕಾಶವಿದೆ. ನಾವು ಮಾಡಿರುವುದು ಅದನ್ನೇ. ಸಂವಿಧಾನದ ಅಡಿಯಲ್ಲಿ ವಸ್ತ್ರಸಂಹಿತೆ ನೀತಿ ಪಾಲಿಸಿದ್ದೇವ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದುಗಳ ಸಂಖ್ಯೆ ಹೆಚ್ಚು ಜನಿವಾರ-ಕುಂಕುಮ ಬ್ಯಾನ್ ಮಾಡೋಕಾಗುತ್ತಾ?: “ಹಿಂದೂಗಳು ಜನಿವಾರ ಧರಿಸುತ್ತಾರೆ, ಕುಂಕುಮ ಇಡುತ್ತಾರೆ. ಮುಸ್ಲಿಮರು ಈ ವಿಧಿವಿಧಾನ ಆಚರಿಸಲು ಸಾಧ್ಯವೇ? ಅವರವರ ಧರ್ಮಕ್ಕೆ ಅವರದ್ದೇ ಆಚರಣೆ ಇರುತ್ತದೆ. ಕುಂಕುಮ ಇಡುವುದನ್ನು ಬ್ಯಾನ್ ಮಾಡಲು ಆಗುತ್ತಾ? ಎಲ್ಲರ ಸಂಪ್ರದಾಯವನ್ನು ಗೌರವಿಸಬೇಕಿರುವುದೇ ಸಂವಿಧಾನದ ಆಶಯ.
“ಬರೀ ಕೇಸರಿ ಶಾಲು ಹಾಕಿ ಎಂದು ಮಕ್ಕಳನ್ನು ಎತ್ತಿಕಟ್ಟುತ್ತೀರಲ್ಲಾ, ಇದರಿಂದ ಉದ್ಯೋಗ ಸಿಗುತ್ತಾ? ಬಿಜೆಪಿ ಸಚಿವರು, ಮುಖಂಡರು ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ ಓದಿಸುತ್ತಾರೆ, ಬಡವರ ಮಕ್ಕಳಿಗೆ ಶಾಲು ಕೊಟ್ಟು ಬೀದಿಗೆ ಬಿಡುತ್ತಾರೆ ಎಂದು ಕಿಡಿಕಾರಿದರು.
ಹನುಮಾನ್ ಚಾಲೀಸಾ ಎಷ್ಟು ಹಿಂದುಗಳಿಗೆ ಗೊತ್ತು?: “ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ಮಕ್ಕಳಿಗೆ ಹನುಮಾನ್ ಚಾಲೀಸಾ ಬರುತ್ತದೆಯೇ ಕೇಳಿ ಅವರ ಮಕ್ಕಳು ಮಾತ್ರ ಒಳ್ಳೊಳ್ಳೆ ಶಾಲಾ-ಕಾಲೇಜುಗಳಿಗೆ ಹೋಗಬೇಕು, ಬೇರೆಯವರ ಮಕ್ಕಳು ಮಾತ್ರ ಧರ್ಮದ ಹೆಸರಲ್ಲಿ ಕಿತ್ತಾಡುತ್ತಾ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಕೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶಗಳಂತೆ ವೈಜ್ಞಾನಿಕ ಮನೋಭಾವ ವೃದ್ಧಿಯಾಗಬೇಕು
ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಭವಿಷ್ಯ ರೂಪಿಸಲು ಶಾಲೆಗಳನ್ನು ಕಟ್ಟಲಾಗಿದೆ. ಧಾರ್ಮಿಕವಾಗಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಧರ್ಮದ ಆಚರಣೆಗಳನ್ನು ಕಲಿಸುತ್ತಾರೆ. ಆದರೆ ಶಾಲೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕಿರುವುದು ಬಹುಮುಖ್ಯ. ಚೀನಾದಂತಹ ದೇಶಗಳನ್ನು ನೋಡಿ ಕಲಿಯಿರಿ,ಅಲ್ಲಿನ ಮಕ್ಕಳು ಹೇಗೆ ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದಾರೆ ಎಂದು ನಾವು ನೋಡಬೇಕು. ದೇಶದ ಉದ್ಧಾರದ ಬಗ್ಗೆ ನಿರಂತರ ಮಾತನಾಡುವ ಮೋದಿ ಎಷ್ಟು ಯೂನಿವರ್ಸಿಟಿಗಳನ್ನು ಕಟ್ಟಿದ್ದಾರೆ? ಇಂದಿನ ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ?” ಎಂದು ಸಚಿವರು ಪ್ರಶ್ನಿಸಿದರು.ಮೋದಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಬಿಜೆಪಿ ಇಂತಹ ವಿವಾದಗಳನ್ನು ಸೃಷ್ಟಿಸುತ್ತಿದೆ.ನಮ್ಮ ಸಮಾಜವನ್ನು ಇವರು ಇನ್ನೂ ನೂರು ವರ್ಷ ಹಿಂದಕ್ಕೆ ತಳ್ಳಲು ನೋಡುತ್ತಿದ್ದಾರೆ ಆದರೆ ನಾವು ಬಿಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
#PriyankKharge #HijabControversy #KarnatakaPolitics #CongressVsBJP #ConstitutionOfIndia #EducationFirst #PriyankKhargeSpeech #FreedomTV #KarnatakaNews #ScientificTemper #Employment




