ಬೆಂಗಳೂರು : ಜಾಹೀರಾತು ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಏಕೈಕ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯ 29ನೇ ಅಧ್ಯಕ್ಷರಾಗಿ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ಕೃಷ್ಣ ಸೈಲ್ ರವರು ಪದಗ್ರಹಣ ಮಾಡಿದರು. ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ. ಪೂಜಾರಿ ಹಾಗೂ ಸಿಬ್ಬಂದಿ ಸ್ವಾಗತ ಕೋರಿ, ಅಭಿನಂದನೆ ಸಲ್ಲಿಸಿದ್ರು.
ಪದಗ್ರಹಣದ ಬಳಿಕ ಮಾತ್ನಾಡಿದ ಸತೀಶ್ ಸೈಲ್, ಈ ಹೆಮ್ಮೆಯ ಸಂಸ್ಥೆಗೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಕರ್ನಾಟಕ ಸರ್ಕಾರವು ಈ ಸಂಸ್ಥೆಯನ್ನು ಸರ್ವ ರೀತಿಯಲ್ಲೂ ಪ್ರಗತಿಪರವಾಗಿ ಮುನ್ನಡೆಸಲು ಸರ್ಕಾರವು ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ನಾನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂಬ ಭರವಸೆಯನ್ನು ನೀಡಬಯಸುತ್ತೇನೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದಿಂದ ಆಗಬೇಕಾಗಿರುವ ಎಲ್ಲಾ ಸ್ಥರದ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಸುವುದರ ಜೊತೆ ಸರ್ಕಾರದ ಮಟ್ಟದ ಎಲ್ಲಾ ರೀತಿಯ ಬೆಂಬಲವನ್ನು ಪಡೆಯಲು ನಾನು ಅತ್ಯಂತ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಇದು ನನ್ನ ಗುರಿ ಎಂದು ತಿಳಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಅಗತ್ಯವಾದ ವಿಚಾರಗಳ ಬಗ್ಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಹಕರುಗಳ ಜೊತೆ ಚರ್ಚಿಸಿ ಅವರುಗಳ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿ, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯ ಜೊತೆ ಸಮಾಜಮುಖಿ ಕೆಲಸ ಮಾಡುವುದರಲ್ಲಿಯೂ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಪದಗ್ರಹಣ ಸಮಾರಂಭದಲ್ಲಿ ಶಾಸಕ ಸತೀಶ್ ಸೈಲ್ ಪತ್ನಿ, ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ನಂದೀಶ್, ಉಪ ನಿರ್ದೇಶಕ ಲತಾ ನಾಯಕ್, ವ್ಯವಸ್ಥಾಪಕರಾದ ರಶ್ಮಿ ಯದಾಟಿ, ನಾಗಪ್ಪ ಕಿತ್ತೂರ್, ಸಹಾಯಕ ವ್ಯವಸ್ಥಾಪಕರಾದ ತೇಜಾವತಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.