bengaluru

ಸಂಪಂಗಿಕೆರೆಯಲ್ಲಿ ಹಸಿ ಕರಗ ಶಕ್ತ್ಯೋತ್ಸವ ಸಂಪನ್ನ!

ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸಂಭ್ರಮದ ಪ್ರತೀಕವಾಗಿರುವ ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಈಗ ಅಧಿಕೃತವಾಗಿ ಕೌಂಟ್‌ಡೌನ್ ಆರಂಭವಾಗಿದೆ. ಈ ಮಹೋತ್ಸವದ ಅತ್ಯಂತ ಪ್ರಮುಖ ಘಟ್ಟವಾದ ಹಸಿ ಕರಗ ಶಕ್ತ್ಯೋತ್ಸವವು ಇಂದು ಮುಂಜಾನೆ ಸಂಪಂಗಿ ರಾಮನಗರದಲ್ಲಿರುವ ಐತಿಹಾಸಿಕ ಸಂಪಂಗಿಕೆರೆಯ ಶಕ್ತಿಪೀಠದಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿದ ಈ ಉತ್ಸವವು ನಗರದ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

ಈ ಬಾರಿಯ ಹಸಿ ಕರಗ ಉತ್ಸವದ ವಿಶೇಷತೆಯೆಂದರೆ ಎ. ಜ್ಞಾನೇಂದ್ರ ಸ್ವಾಮಿಯವರು ಸತತ 16ನೇ ಬಾರಿಗೆ ಅತ್ಯಂತ ಯಶಸ್ವಿಯಾಗಿ ಹಸಿ ಕರಗವನ್ನು ಹೊತ್ತಿರುವುದು. ಭಕ್ತಿ ಮತ್ತು ಶಿಸ್ತಿನಿಂದ ಹಸಿ ಕರಗವನ್ನು ಹೊತ್ತ ಸ್ವಾಮಿಯವರು ನಗರದ ವಿವಿಧ ರಾಜಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಿದರು. ಮಾರ್ಗಮಧ್ಯೆ ಜಿಬಿಎ ಮುಖ್ಯ ಕಚೇರಿಗೆ ಆಗಮಿಸಿದ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಕೆ.ಆರ್. ಮಾರುಕಟ್ಟೆ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯು ಅಂತಿಮವಾಗಿ ತಿಗಳರಪೇಟೆಯಲ್ಲಿರುವ ಪವಿತ್ರ ಶ್ರೀ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪಿತು.

ಕರಗ ಮಹೋತ್ಸವದ ಅಸಲಿ ಸಂಭ್ರಮ ನಾಳೆ ಮಧ್ಯರಾತ್ರಿ ನಡೆಯಲಿರುವ ಚೈತ್ರ ಪೌರ್ಣಮಿಯ ಹೂವಿನ ಕರಗದೊಂದಿಗೆ ಪರಾಕಾಷ್ಠೆ ತಲುಪಲಿದೆ. ನಾಳೆ ರಾತ್ರಿ ಹೂವಿನ ಕರಗದ ರೂಪದಲ್ಲಿ ಹೊರಬರುವ ಶಕ್ತಿ ದೇವತೆಯು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರಿನ ಐತಿಹಾಸಿಕ 25 ಪೇಟೆಗಳಲ್ಲಿ ಸಂಚರಿಸಲಿದ್ದಾಳೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದೇವಿಯ ದರ್ಶನ ಪಡೆಯಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಕರಗವು ನಾಡಿದ್ದು ಬೆಳಗ್ಗೆ 6 ಗಂಟೆಯ ಒಳಗೆ ಪುನಃ ಧರ್ಮರಾಯಸ್ವಾಮಿ ದೇವಾಲಯಕ್ಕೆ ಮರಳುವ ಮೂಲಕ ಮೂರು ದಿನಗಳ ಈ ಅದ್ಭುತ ಕರಗ ಮಹೋತ್ಸವಕ್ಕೆ ತೆರೆ ಬೀಳಲಿದೆ.

Comments (0)

Your email address will not be published. Required fields are marked *

Back to top button