ಭಾರತೀಯ ಚಿತ್ರರಂಗದಲ್ಲಿ ‘ರಾಮಾಯಣ’ದ ಅಲೆ ಎದ್ದಿದ್ದು, ದಕ್ಷಿಣ ಭಾರತದ ಇಬ್ಬರು ಸೂಪರ್ಸ್ಟಾರ್ಗಳ ನಡುವೆ ಬಾಕ್ಸ್ ಆಫೀಸ್ ಹಣಾಹಣಿ ಏರ್ಪಡುವ ಲಕ್ಷಣಗಳು ಕಾಣುತ್ತಿವೆ. ರಣಬೀರ್ ಕಪೂರ್ ರಾಮನಾಗಿ ಮತ್ತು ರಾಕಿ ಭಾಯ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷದ ದೀಪಾವಳಿಗೆ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಪ್ರತಿಯಾಗಿ ಎಂಬಂತೆ ದಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಮಹೇಶ್ ಬಾಬು ಜೊತೆ ಸೇರಿ ಪೌರಾಣಿಕ ಹಿನ್ನೆಲೆಯ ‘ವಾರಣಾಸಿ’ ಚಿತ್ರವನ್ನು ನಿರ್ಮಿಸುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ.
ರಾಜಮೌಳಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ತಾನು ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ಮಹೇಶ್ ಬಾಬು ಅಧಿಕೃತವಾಗಿ ಹೇಳಿದ್ದಾರೆ . ಕೇವಲ ಒಂದೆರಡು ದೃಶ್ಯಗಳ ಅಚ್ಚುಕಟ್ಟುತನಕ್ಕಾಗಿ ಅವರು ಬರೋಬ್ಬರಿ ಆರು ತಿಂಗಳ ಕಾಲ ಕಠಿಣ ತರಬೇತಿ ಪಡೆದಿದ್ದಾರೆ ಎನ್ನುವುದು ವಿಶೇಷ. ಆಧುನಿಕ ಪಾತ್ರಗಳಿಗಿಂತ ಭಿನ್ನವಾಗಿರುವ ರಾಮನ ಗಾಂಭೀರ್ಯ ಮತ್ತು ದೈವತ್ವವನ್ನು ಮೈಗೂಡಿಸಿಕೊಳ್ಳಲು ಅವರು ಕಳರಿಪಯಟ್ಟು ಅಂತಹ ಪ್ರಾಚೀನ ಸಮರಕಲೆಗಳನ್ನು ಅಭ್ಯಾಸ ಮಾಡಿದ್ದು, ಇದು ಅವರ ದೈನಂದಿನ ನಡಿಗೆ ಮತ್ತು ಕುಳಿತುಕೊಳ್ಳುವ ಭಂಗಿಯ ಮೇಲೂ ಪ್ರಭಾವ ಬೀರಿದೆ ಎಂದು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
ಈ ಎರಡು ಸಿನಿಮಾಗಳು ಒಂದೇ ಕಾಲಘಟ್ಟದಲ್ಲಿ ಸದ್ದು ಮಾಡುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಒಂದು ಕಡೆ ರಣಬೀರ್ ಮತ್ತು ಯಶ್ ಅವರ ಜುಗಲ್ಬಂದಿ ಇದ್ದರೆ, ಮತ್ತೊಂದೆಡೆ ರಾಜಮೌಳಿ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಮಹೇಶ್ ಬಾಬು ಅವರ ರಾಮನ ಅವತಾರವಿದೆ. ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಅವರು ಕೂಡ ‘ಕುಂಭ’ ಎನ್ನುವ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದು ಅತಿದೊಡ್ಡ ಪೌರಾಣಿಕ ಯುದ್ಧಕ್ಕೆ ನಾಂದಿ ಹಾಡಲಿದೆ.


