ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವ್ಯಾಟ್ಸಾಪ್ಗೆ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಎಚ್ಚರಿಕೆ ..!
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವ್ಯಾಟ್ಸಾಪ್ಗೆ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಇಲ್ಲಿನ ವ್ಯವಹಾರವನ್ನು ಬಂದ್ ಮಾಡಿ ಹೊರಡಿ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು ಮೆಟಾ ಸಂಸ್ಥೆಗೆ ಖಡಕ್ ವಾರ್ನಿಂಗ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತದಲ್ಲಿ ವ್ಯಾಟ್ಸಾಪ್ ಸೇವೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಬಳಕೆದಾರರಲ್ಲಿ ಶುರುವಾಗಿದೆ.
ಬಳಕೆದಾರರ ಖಾಸಗಿತನ ಅಥವಾ ಪ್ರೈವಸಿ ವಿಚಾರದಲ್ಲಿ ಭಾರತದ ನಿಯಮಗಳನ್ನೇ ಪಾಲಿಸಬೇಕು. ಬೇರೆ ದೇಶಗಳಲ್ಲಿ ಒಂದು ನೀತಿ ಮತ್ತು ಭಾರತದಲ್ಲಿ ಮತ್ತೊಂದು ನೀತಿಯನ್ನು ಅನುಸರಿಸಲು ಬಿಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಯಾವುದೇ ಕಾರಣಕ್ಕೂ ವ್ಯಾಟ್ಸಾಪ್ ಬಳಕೆದಾರರ ಡೇಟಾವನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಅಥವಾ ಇತರ ಪ್ಲಾಟ್ಫಾರ್ಮ್ಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ. ಡೇಟಾ ಹಂಚಿಕೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗ್ರಾಹಕರ ಡೇಟಾವನ್ನು ಇತರ ಪ್ಲಾಟ್ಫಾರ್ಮ್ಗಳೊಂದಿಗೆ ಹಂಚಿಕೊಳ್ಳುವುದು ಮಾರುಕಟ್ಟೆ ಪ್ರಾಬಲ್ಯದ ದುರುಪಯೋಗ ಎಂದು ಎನ್ಸಿಎಲ್ಎಟಿ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮೆಟಾ ಮತ್ತು ಸಿಸಿಐ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯವು ಮೆಟಾ ಸಂಸ್ಥೆಯ ನಡೆಯನ್ನು ತೀವ್ರವಾಗಿ ಖಂಡಿಸಿದೆ.
ಭಾರತವು ವ್ಯಾಟ್ಸಾಪ್ಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಒಂದು ವೇಳೆ ಮೆಟಾ ಸಂಸ್ಥೆಯು ಭಾರತದ ಪ್ರೈವಸಿ ನಿಯಮಗಳಿಗೆ ಬದ್ಧವಾಗದಿದ್ದರೆ ದೊಡ್ಡ ಮಟ್ಟದ ಕಾನೂನು ಸಂಘರ್ಷ ಎದುರಾಗುವುದು ಖಚಿತವಾಗಿದೆ.


