ಗೌರಿ-ಗಣೇಶ ಹಬ್ಬದ ಸಂಭ್ರಮ: ಮಾರ್ಕೆಟ್ನಲ್ಲಿ ಜನವೋ ಜನ

ಬೆಂಗಳೂರು : ಹಬ್ಬ ಬಂತೆಂದರೆ ಸಾಕು, ಹಬ್ಬದ ತಯಾರಿ, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾರ್ಕೆಟ್ನಲ್ಲಿ ಜೋರಾಗಿದೆ. ವರಮಹಾಲಕ್ಷ್ಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬ ಅಂದ್ರೆ ಗೌರಿ – ಗಣೇಶ ಹಬ್ಬ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೆ ಏರಿದ್ದು, ಕೆ.ಆರ್ ಮಾರ್ಕೆಟ್ನಲ್ಲಿ ಜನವೋ ಜನವೋ. ಇಂದು ಗೌರಿಗೆ ವಿಶೇಷ ಪೂಜೆ ಹಾಗೂ ನಾಳೆ ಗೌರಿ ಮಗ ಗಣಪತಿ ಪ್ರತಿಷ್ಠಾಪನೆ ಮಾಡುವುದರಿಂದ ಹೂವು, ಹಣ್ಣುಗಳ ಖರೀದಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರ್ಕೆಟ್ಗೆ ಬಂದಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಆಗಿದೆ. ಇದರಿಂದ ಮಾರ್ಕೆಟ್ ಸುತ್ತಲಿನ ರಸ್ತೆಗಳಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಆಗಿದೆ.
ಇದರಿಂದ ಡ್ರೈವರ್ಗಳು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವು ಬಿಎಂಟಿಸಿ ಬಸ್ ಅಂತೂ ಮಾರ್ಕೆಟ್ಗೆ ಹೋಗದೇ ಒಂದು ಸ್ಟಾಪ್ ಹಿಂದೆಯೇ ಪ್ರಯಾಣಿಕರನ್ನು ಇಳಿಸಿ ವಾಪಸ್ ಹೋಗುತ್ತಿವೆ. ಕಳೆದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೆ ಏರಿವೆ. ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟೇ ಖರೀದಿ ಮಾಡುತ್ತಿದ್ದಾರೆ. ಇನ್ನು ಕೆಆರ್ ಮಾರ್ಕೆಟ್ ನಿನ್ನೆಯಿಂದಲೇ ವ್ಯಾಪಾರಸ್ಥರು, ಗ್ರಾಹಕರು, ಸಾರ್ವಜನಿಕರಿಂದ ತುಂಬಿ ಹೋಗಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಎಲ್ಲರೂ ಮುಗಿಬಿದ್ದಿದ್ದಾರೆ.




