ಮೈಸೂರು: ಲಂಚ ಸ್ವೀಕರಿಸುವಾಗಲೇ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಾವೇರಿ ರಂಗನಾಥ್ ಹಾಗೂ ಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟೆಂಡರ್ ಹಣ ಬಿಡುಗಡೆಗೆ ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಇಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2022ರಲ್ಲಿ ನಾಲೆ ರಿಪೇರಿಗೆ ಟೆಂಡರ್ ಕರೆಯಲಾಗಿತ್ತು. 23.10 ಲಕ್ಷ ರೂ.ಗೆ ಕಾಮಗಾರಿ ಹಣ ಬಿಡುಗಡೆ ಮಾಡಲು ಮೊದಲು 6% ಲಂಚ ಬೇಡಿಕೆ ಇಟ್ಟಿದ್ದರು
ಸ್ವಲ್ಪ ದಿನಗಳ ಬಳಿಕ 1 ಲಕ್ಷದ 45 ಸಾವಿರ ರೂ.ಗೆ ಡಿಮ್ಯಾಂಡ್ ಮಾಡಲಾಗಿತ್ತು. ಈ ಮೂಲಕ ಕಾಮಗಾರಿ ಹಣ ಪಡೆಯಲು ಬಂದಾಗ 10% ಲಂಚ ಏರಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಇಂದು (ಏ.7) ಇಬ್ಬರೂ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.