ವೈರಲ್ ನ್ಯೂಸ್ಸುದ್ದಿ

ಮನಮಿಡಿಯುವ ದೃಶ್ಯ : ಅಮ್ಮನ ಮಡಿಲು ಸೇರಿದ ಕಂದಮ್ಮ..

‘ಪ್ರಾಣಿಗಳೇ ಗುಣದಲಿ ಮೇಲು… ಮಾನವನದಕಿಂತ ಕೀಳು…’ ಅಣ್ಣಾವ್ರ ಈ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೀರಿ.. ಈ ಮಾತು ಸತ್ಯವೂ ಹೌದು. ಪ್ರಾಣಿಗಳಿಗಿರುವ ಗುಣ, ಮುಗ್ಧತೆ, ಬುದ್ದಿವಂತಿಕೆ, ಮಾನವೀಯತೆ, ಸೂಕ್ಷ್ಮತೆ, ಸಂವೇದನಾಶೀಲತೆ ಮಾನವನಲ್ಲಿ ತುಸು ಕಡಿಮೆಯೇ.. ಒಂದು ಫೋಟೋ ಸಾವಿರ, ಸಾವಿರ ಪದಗಳಿಗೆ ಸಮ ಅನ್ನೋದು ಅಕ್ಷರಶಃ ಸತ್ಯ. ತಮಿಳುನಾಡಿನ ಅರಣ್ಯದಲ್ಲಿ ತೆಗೆದ ಒಂದು ಫೋಟೋ ಮನಮಿಡಿಯುವ ಕಥೆಯೊಂದನ್ನ ಹುಟ್ಟುಹಾಕಿದೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಕೂಡ ಆಗಿದೆ.

ಜಸ್ಟ್‌….ಒಂದೇ ಒಂದು ಫೋಟೋ…ತಮಿಳುನಾಡು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, IAS ಅಧಿಕಾರಿ ಸುಪ್ರಿಯಾ ಸಾಹು ಅವರು ಈ ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಜೊತೆಗೆ ತಾಯಿ ಆನೆಯಿಂದ ಬೇರೆಯಾಗಿದ್ದ ಮರಿಯಾನೆಯ ಕಥೆಯನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಣಾ ಅಭಯಾರಣ್ಯದಲ್ಲಿ ಆನೆ ಮರಿಯೊಂದು ತನ್ನ ತಾಯಿಯಿಂದ ತಪ್ಪಿಸಿಕೊಂಡಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆಗೆ ಇಳಿದಿತ್ತು. ಡ್ರೋನ್ ಹಾಗೂ ಸಿಬ್ಬಂದಿಗಳ ಸಹಾಯದಿಂದ ಕೊನೆಗೂ ಮರಿಯಾನೆಯನ್ನು ಪತ್ತೆ ಹಚ್ಚಿದ್ರು…ದೂರವಾಗಿದ್ದ ಮರಿಯಾನೆಯನ್ನು ಹರಸಾಹಸ ಪಟ್ಟು ತಾಯಿ ಆನೆಯ ಜೊತೆ ಜೊತೆಗೂಡಿಸಿದ್ದಾರೆ…ತಾಯಿ ಆನೆ ಬಳಿ ಸೇರಿಕೊಂಡ ಮರಿಯಾನೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇದಾದ ಬಳಿಕ ಅರಣ್ಯ ಸಿಬ್ಬಂದಿ ಆನೆ ಹಾಗೂ ಮರಿಯಾನೆ ಆಯಾಗಿ ಮಲಗಿರೋ ಫೋಟೋ ಒಂದನ್ನ ಸೆರೆ ಹಿಡಿದಿದ್ದಾರೆ.

ಅರಣ್ಯ ಸಿಬ್ಬಂದಿ ಸೆರೆ ಹಿಡಿದ ಈ ಸುಂದರ ಫೋಟೋವನ್ನು IAS ಅಧಿಕಾರಿ ಸುಪ್ರಿಯಾ ಸಾಹು ಅವರ X ಖಾತೆಯಲ್ಲಿ ಹಂಚಿಕೊಂಡು ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಗೆ ಧನ್ಯವಾದ ತಿಳಿಸಿದ್ರು. ಸುಪ್ರಿಯಾ ಸಾಹು ಅವರ ಟ್ವೀಟ್ ನೋಡಿದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು, ಇದು ಎಷ್ಟೊಂದು ಅದ್ಭುತವಾದ ಫೋಟೋ. ಆನೆಯ ಮಡಿಲು ಸೇರಿದ ಅಂತಿಮ ಫೋಟೋ ಭಾವನಾತ್ಮಕ ಸಂದೇಶವನ್ನು ಸಾರುತ್ತಿದೆ. ಇದು ನಿಮ್ಮ ಸಾಕ್ಷ್ಯಚಿತ್ರದಲ್ಲಿ ಸೇರಿಕೊಳ್ಳವಂತದ್ದು ಎಂದಿದ್ದಾರೆ.

Comments (0)

Your email address will not be published. Required fields are marked *

Back to top button