ಮೈಸೂರು: ರೈಲು ಬರುತ್ತಿದ್ದರೂ ಗೇಟ್ ಹಾಕದೆ ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಾ ಮೈಮರೆತು ಕುಳಿತ ಸ್ಟೇಷನ್ ಮಾಸ್ಟರ್ ಈಗ ರೈಲು ಅಪಘಾತಕ್ಕೆ ಕಾರಣನಾಗಿದ್ದಾನೆ. ಪರಿಣಾಮ ರೈಲಿಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಮೈಸೂರಿಗೆ ಹೊರಟಿದ್ದ ದಸರಾ ವಿಶೇಷ ರೈಲು ಆಗಿತ್ತು.
ಈ ಘಟನೆ ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ನಡೆದಿದೆ. ರೈಲು ಬರುವ ವೇಳೆ ಗೇಟ್ ಹಾಕಬೇಕಿದ್ದ ಸ್ಟೇಷನ್ ಮಾಸ್ಟರ್ ರೈಲು ಬರುತ್ತಿದ್ದರೂ ಗಮನಿಸದೆ ಮೊಬೈಲ್ನಲ್ಲಿ ವಿಡಿಯೋ ನೋಡುತ್ತಾ ಕುಳಿತಿದ್ದರು. ಗೇಟ್ ತೆಗೆದಿರುವುದು ನೋಡಿ, ರೈಲು ಹೋಗಿರಬಹುದು ಎಂದು ಭಾವಿಸಿ ಆಟೋ ಚಾಲಕ ನೇರ ಹಳಿ ದಾಟಲು ಮುಂದಾಗಿದ್ದ.
ವೇಗವಾಗಿ ಬರುತ್ತಿದ್ದ ದಸರಾ – ಅರಸೀಕೆರೆ ನಡುವೆ ಸಂಚರಿಸುವ ದಸರಾ ವಿಶೇಷ ರೈಲು ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಚಾಲಕ, 9 ವರ್ಷದ ಒಂದು ಮಗು ಹಾಗೂ ಐದು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಕ್ಕಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ. ಇದು ಗಂಭೀರ ಲೋಪ. ರೈಲು ಬರುವಾಗ ಗೇಟ್ ಹಾಕಬೇಕು. ವಾಹನ ಸವಾರರನ್ನು ಎಚ್ಚರಿಸಬೇಕು ಆದರೆ ರೈಲು ಬರುವ ವೇಳೆಯೂ ಮೊಬೈಲ್ನಲ್ಲಿ ಮಗ್ನನಾಗಿದ್ದ ಗೇಟ್ ಕೀಪರ್ ಹಾಗೂ ಸ್ಟೇಶನ್ ಮಾಸ್ಟರ್ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ ಗ್ರಾಮಸ್ಥರು, ರೈಲನ್ನು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.