ಕ್ರಿಕೆಟ್ಸುದ್ದಿ

RCB vs CSK – ಹೈ ವೋಲ್ಟೇಜ್ ಪಂದ್ಯ ಮಳೆಯಿಂದ ವಾಷ್‌ಔಟ್‌ ಆಗುವ ಸಾಧ್ಯತೆ!

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆಯಲಿರುವ ಹೈ ವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಹಾಗೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಬಿಸಿಲಿನ ಝಳದಲ್ಲೊ ಬೆಂದಿದ್ದ ನಗರಕ್ಕೆ ಮಳೆರಾಯ ಕೃಪೆ ತೋರಿ ತಣ್ಣೀರೆರೆದಿದ್ದಾನೆ. ಆದರೆ, ಕ್ರಿಕೆಟ್‌ ಅಭಿಮಾನಿಗಳಿಗೆ ಇದು ಅತೀವ ಬೇಸರ ತಂದಿದ್ದು, ಮೇ 18ರಂದು ಮಳೆಯಾಗದೇ ಇರಲಿ ಎಂದು ಪ್ರಾರ್ಥನೆ ಶುರು ಮಾಡಿದ್ದಾರೆ.

ಆತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈವರೆಗೆ ಆಡಿದ 13 ಪಂದ್ಯಗಳಿಂದ 12 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ಸ್‌ ಟಿಕೆಟ್‌ ಪಡೆಯಲು ಎದುರು ನೋಡುತ್ತಿದೆ. ಉತ್ತಮ ನೆಟ್‌ ರನ್‌ರೇಟ್‌ ಆರ್‌ಸಿಬಿ ಕೈ ಹಿಡಿದಿದೆ. ಆದರೆ, ಮ್ಯಾಜಿಕ್‌ ನಂಬರ್‌ 14 ಅಂಕಗಳನ್ನು ಸಂಪಾದಿಸಲು ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಜಯ ದಾಖಲಿಸಬೇಕಿದೆ. ಅಷ್ಟೇ ಅಲ್ಲದೆ ರನ್‌ಚೇಸ್‌ ಮಾಡಿದರೆ 18 ಓವರ್‌ಗಳ ಒಳಗೆ ಗೆಲ್ಲಬೇಕು. ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು. ಈ ಸುಲಭ ಲೆಕ್ಕಾಚಾರದ ಗೆಲುವು ಕೂಡ ಆರ್‌ಸಿಬಿಗೆ ಅಗತ್ಯವಿದೆ.

ಆದರೆ, ಆರ್‌ಸಿಬಿ ತಂಡದ ಎಲ್ಲಾ ಲೆಕ್ಕಾಚಾರಗಳಿಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹವಾಮಾನ ವರದಿ ಪ್ರಕಾರ ಶನಿವಾರ ಸಂಜೆ 5-11ರವರೆಗೆ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ವಾಷ್‌ಔಟ್‌ ಆದರೆ ಆರ್‌ಸಿಬಿ ಪ್ಲೇ ಆಫ್ಸ್‌ ರೇಸ್‌ನಿಮದ ಹೊರಬೀಳಲಿದ್ದು, ಸಿಎಸ್‌ಕೆ 15 ಅಂಕಗಳೊಂದಿಗೆ ಮುಂದಿನ ಘಟ್ಟಕ್ಕೆ ತೇರ್ಗಡೆಯಾಗಲಿದೆ.

ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಹವಾಮಾನ ವರದಿ

ವೆದರ್‌ ಡಾಟ್‌ ಕಾಮ್‌ ಒದಗಿಸಿರುವ ಮಾಹಿತಿ ಅನುಗುಣವಾಗಿ ಶನಿವಾರ ಬೆಳಗ್ಗಿನಿಂದಲೇ ಮಳೆಯಾಗುವ ಸಾಧ್ಯತೆ ಶೇ. 73ರಷ್ಟಿದೆ. ಸಂಜೆ 6ರ ಸುಮಾರಿಗೆ ಮಳೆ ಸಂಭಾವ್ಯತೆಯ ಪ್ರಮಾಣ ಶೇ.80ರಷ್ಟಿರಲಿದೆ. ಇನ್ನು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯ 7:30ಕ್ಕೆ ಶುರುವಾಗಲಿದೆ. ಲೀಗ್‌ನಲ್ಲಿ ಈಗಾಗಗಲೇ ಗುಜರಾತ್‌ ಟೈಟನ್ಸ್‌ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯ ಮಳೆ ಕಾರಣ ರದ್ದಾಗಿತ್ತು. ಅಂಕ ಹಂಚಿಕೊಂಡ ಕಾರಣ ಗುಜರಾತ್‌ ಟೈಟನ್ಸ್‌ ತಂಡ ಪ್ಲೇ ಆಫ್ಸ್‌ ರೇಸ್‌ನಿಂದ ಹೊರಬೀಳಬೇಕಾಯಿತು. ಈಗ ಆರ್‌ಸಿಬಿ ಕೂಡ ಅಂಥದ್ದೇ ಆತಂಕ ಎದುರಿಸಿದೆ.

ಸಬ್‌ ಏರ್‌ ಸಿಸ್ಟಮ್‌ ಪಂದ್ಯ ಆಯೋಜನೆಗೆ ಸಂಜೀವಿನಿ

ಮಳೆ ಅಬ್ಬರ ಕಡಿಮೆಯಾಗಿ ಪಂದ್ಯಕ್ಕೆ ಅವಕಾಶ ಸಿಕ್ಕರೆ ರಾತ್ರಿ 10;56ರ ಬಳಿಕ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ಆಡಿಸಲು ಸಾಧ್ಯ. ಎಷ್ಟೇ ಜೋರಾಗಿ ಮಳೆ ಬಂದರು ಕೇವಲ 30 ನಿಮಿಗಳಲ್ಲಿ ಆಟಕ್ಕೆ ಅಂಗಣವನ್ನು ಒಣಗಿಸಿಕೊಡುವಂತಹ ಅತ್ಯಾಧುನಿಕ ಸಬ್‌ ಏರ್‌ ಸಿಸ್ಟಮ್‌ ಡ್ರೇನೇಜ್‌ ವ್ಯವಸ್ಥೆಯನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಹೊಂದಿದೆ. ಹೀಗಾಗಿ ವರುಣನ ಅಬ್ಬರ ನಿಂತರೆ ಹೈ ವೋಲ್ಟೇಜ್‌ ಕದನಕ್ಕೆ ವೇದಿಕೆ ಒದಗಿಸಲು ಬೆಂಗಳೂರು ಕ್ರೀಡಾಂಗಣ ಸಿದ್ಧವಾಗಿದೆ. ಆದರೆ, ಮಳೆ ಬಿಡದೇ ಸುರಿದರೆ ಮಾತ್ರ ಆಟ ಆಯೋಜಿಸಲು ಸಾಧ್ಯವಿಲ್ಲ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

Comments (0)

Your email address will not be published. Required fields are marked *

Back to top button