ಬಿಜೆಪಿ ಟಿಕೆಟ್ ಘೋಷಣೆ ನಂತ್ರ ನಮ್ಮದೇ ಆದ ನಿರ್ಧಾರ ಎಂದಿದ್ದೇಕೆ ಸುಮಲತಾ ಅಂಬರೀಷ?

ಮಂಡ್ಯ: ನಾನು ಮಂಡ್ಯ ಬಿಟ್ಟು ಹೋಗಲ್ಲ. ನನಗೆ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ. ಬಿಜೆಪಿ ಟಿಕೆಟ್ ಸಿಗಲಿಲ್ಲ ಅಂದ್ರೆ ಮುಂದೆ ನೋಡೋಣ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಬಿಜೆಪಿ ವರಿಷ್ಠರು ವಿಶ್ವಾಸದ, ಪ್ರೋತ್ಸಾಹದ ಮಾತುಗಳನ್ನು ಆಡಿದ್ದಾರೆ. ಹೈಕಮಾಂಡ್ ನನಗೆ ಭರವಸೆ ನೀಡಿದೆ. ಬಿಜೆಪಿಯಲ್ಲಿ ನನ್ನ ಬಗ್ಗೆ ಗೌರವ ಇದೆ. ನೀವು ನಮ್ಮ ಪಕ್ಷಕ್ಕೆ ಬೇಕು. ಮಂಡ್ಯ ಭಾಗದಲ್ಲಿ ಬಿಜೆಪಿ ಬೆಳೆಸಲು ನಿಮ್ಮ ಶಕ್ತಿ ಬೇಕು ಎಂದು ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಹೇಳಿ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಅಂದ್ರೆ ಮುಂದೆ ನೋಡೋಣ ಎಂದು ಅವರು ತಿಳಿಸಿದರು. ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದೆ ಸುಮಲತಾ ಅಂಬರೀಶ್, ರಾಜಕೀಯದಲ್ಲಿ ಏನು ಬೇಕಾದರೂ ಆಗಲಿ. ಯಾರೂ ಅಂದುಕೊಂಡಿದ್ದೆಲ್ಲ ಆಗಬೇಕು ಎಂದು ಕುಳಿತುಕೊಳ್ಳುವುದಿಲ್ಲವಲ್ಲ. ನಮ್ಮದೇ ಆದ ನಿರ್ಧಾರ ಕೈಗೊಳ್ಳಬಹುದಲ್ಲ. ಟಿಕೆಟ್ ಘೋಷಣೆ ಆದ ಮೇಲೆ ನೋಡೋಣ ಎಂದು ಹೇಳಿದರು.




