Top Newsದೇಶ/ವಿದೇಶಸುದ್ದಿ

ಮಧ್ಯಪ್ರಾಚ್ಯದಲ್ಲಿ ಮಹಾಸಮರ; ಮೋದಿ ನೇತೃತ್ವದಲ್ಲಿ ಭದ್ರತಾ ಸಮಿತಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಜ್ವಾಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಭದ್ರತಾ ಸಮಿತಿಯ ಮಹತ್ವದ ಸಭೆ ಜರುಗಿತು. ಈ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಂಡು ಸದ್ಯದ ಜಾಗತಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಿದರು. ಪ್ರಧಾನಿಯವರು ಯುದ್ಧದ ತೀವ್ರತೆ ಮತ್ತು ಅದರಿಂದ ಭಾರತದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಸಚಿವರುಗಳಿಂದ ಇತ್ತೀಚಿನ ಮಾಹಿತಿಗಳನ್ನು ಪಡೆದುಕೊಂಡರು.

ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಭಾರತೀಯರು ವಾಸ್ತವ್ಯ ಹೂಡಿದ್ದು, ಅವರ ಸುರಕ್ಷತೆಯು ಈ ಸಭೆಯ ಪ್ರಮುಖ ಕಾಳಜಿಯಾಗಿತ್ತು. ಒಂದು ವೇಳೆ ಯುದ್ಧದ ಪರಿಸ್ಥಿತಿ ಮಿತಿಮೀರಿ ತೀವ್ರಗೊಂಡರೆ, ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಅನಿವಾರ್ಯತೆ ಎದುರಾಗಬಹುದು ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು. ಇದಕ್ಕಾಗಿ ಸಿದ್ಧಪಡಿಸಬೇಕಾದ ಪರ್ಯಾಯ ಮಾರ್ಗಗಳು ಮತ್ತು ಲಭ್ಯವಿರುವ ಎಲ್ಲಾ ಆಯ್ಕೆಗಳ ಬಗ್ಗೆ ಸಚಿವರುಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿ ಭಾಗದ ಹಾಗೂ ಅಂತಾರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ವರದಿಯನ್ನು ಪ್ರಧಾನಿಯವರಿಗೆ ಹಸ್ತಾಂತರಿಸಿದರು.

ಸಭೆಯ ಅಂತ್ಯದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಭಾರತ ಸನ್ನದ್ಧವಾಗಿರಬೇಕು ಎಂದು ಅಧಿಕಾರಿಗಳು ಮತ್ತು ಸಚಿವರಿಗೆ ಖಡಕ್ ಸೂಚನೆ ನೀಡಿದರು. ಭಾರತೀಯರ ರಕ್ಷಣೆಯ ಜೊತೆಗೆ ತೈಲ ಪೂರೈಕೆ ಮತ್ತು ಆರ್ಥಿಕ ಸ್ಥಿರತೆಯ ಮೇಲಾಗುವ ಪರಿಣಾಮಗಳನ್ನು ನಿರಂತರವಾಗಿ ಗಮನಿಸುವಂತೆ ತಿಳಿಸಿದರು. ಯುದ್ಧ ಪೀಡಿತ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಪ್ರಜೆಗಳೊಂದಿಗೆ ಸತತ ಸಂಪರ್ಕದಲ್ಲಿರುವಂತೆ ಮತ್ತು ಸಹಾಯವಾಣಿಗಳನ್ನು ಸಜ್ಜಾಗಿಡುವಂತೆ ನಿರ್ದೇಶನ ನೀಡಲಾಯಿತು.

Comments (0)

Your email address will not be published. Required fields are marked *

Back to top button