ಹೈದರಾಬಾದ್: ಶಟಲ್ ಬ್ಯಾಡ್ಮಿಂಟನ್ ಆಟವಾಡುತ್ತಿದ್ದಾಗ 25 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ನಾಗೋಲ್ ಕ್ರೀಡಾಂಗಣದಲ್ಲಿ ನಡೆದಿದೆ.
ಗುಂಡ್ಲ ರಾಕೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೈದರಾಬಾದ್ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಈತ ಖಮ್ಮಂ ಜಿಲ್ಲೆಯ ತಲ್ಲಡದ ಮಾಜಿ ಉಪ ಸರಪಂಚ್ ಗುಂಡ್ಲ ವೆಂಕಟೇಶ್ವರಲು ಅವರ ಮಗನಾಗಿದ್ದಾನೆ.
ಶಟಲ್ ಕಾಕ್ ತೆಗೆದುಕೊಳ್ಳಲು ಬಾಗಿದ ಕೆಲವೇ ಕ್ಷಣಗಳಲ್ಲಿ, ಅವರು ಇದ್ದಕ್ಕಿದ್ದಂತೆ ಕೋರ್ಟ್ನಲ್ಲಿ ಕುಸಿದು ಬಿದ್ದರು. ಸಹ ಆಟಗಾರರು ತಕ್ಷಣ ಅವರ ಪಕ್ಕಕ್ಕೆ ಧಾವಿಸಿದರು, ಒಬ್ಬ ವ್ಯಕ್ತಿ ಅವರ ರಕ್ಷಣೆಗೆ ಧಾವಿಸಿದ್ರು. ಎದೆ ಒತ್ತಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಘಟನೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೂಡಲೇ ರಾಕೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಹೃದಯ ಸಂಬಂಧಿ ಕಾಯಿಲೆಗಳು, ಜೀವನಶೈಲಿಯ ಅಂಶಗಳು ಮತ್ತು ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆರೋಗ್ಯ ಕ್ರಮಗಳ ಮಹತ್ವದ ಬಗ್ಗೆ ಎಚ್ಚರಿಕೆ ಪಡೆಯಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.


