ಕೊಪ್ಪಳದ ಅಂಜನಾದ್ರಿಗೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭೇಟಿ!
Famous cricketer Rahul Dravid visits Anjanadri in Koppal!

ಕೊಪ್ಪಳ : ಟೀಂ ಇಂಡಿಯಾ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಐತಿಹಾಸಿಕ ಹಂಪಿ ಮತ್ತು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ತಮ್ಮ ಪತ್ನಿ ಸಮೇತ ಆಗಮಿಸಿದ್ದ ದ್ರಾವಿಡ್, ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ರಾಹುಲ್ ದ್ರಾವಿಡ್ ಅವರು ತಮ್ಮ ಪತ್ನಿಯೊಂದಿಗೆ ಹನುಮನ ದರ್ಶನ ಪಡೆದರು. ಸುಮಾರು 575 ಮೆಟ್ಟಿಲುಗಳನ್ನು ಏರಿ ಬೆಟ್ಟದ ಮೇಲಿರುವ ಹನುಮ ದೇವಾಲಯ ತಲುಪಿದ ದ್ರಾವಿಡ್, ಅಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಅಂಜನಾದ್ರಿ ಭೇಟಿಗೂ ಮುನ್ನ ಬುಧವಾರ ಹಂಪಿಯ ಹಲವು ಐತಿಹಾಸಿಕ ಮತ್ತು ಪವಿತ್ರ ತಾಣಗಳಿಗೆ ದ್ರಾವಿಡ್ ದಂಪತಿ ಭೇಟಿ ನೀಡಿದ್ದರು. ಹಂಪಿಯ ಮುಖ್ಯ ದೇವಾಲಯವಾದ ವಿರೂಪಾಕ್ಷೇಶ್ವರನ ಸನ್ನಿಧಿಗೆ ತೆರಳಿ ದರ್ಶನ ಪಡೆದ ಅವರು, ಸಾಸಿವೆಕಾಳು ಗಣೇಶ ಮತ್ತು ಹೇಮಕೂಟ ಪರ್ವತದ ದೇವಾಲಯಗಳನ್ನು ವೀಕ್ಷಿಸಿದರು.
ನಂತರ ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ದರ್ಶನ ಪಡೆದರು. ಮಧ್ಯಾಹ್ನದ ಬಳಿಕ ಚಕ್ರತೀರ್ಥ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ, ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.




