ನಿಮ್ಮ ಮೊಬೈಲ್ನಲ್ಲಿ ಸೈರನ್ ಮೊಳಗಿದ್ರೆ ಗಾಬರಿಬೇಡ, ಇದು ಸರ್ಕಾರದ ‘ಎಮರ್ಜೆನ್ಸಿ’ ಟೆಸ್ಟ್!

ನಿಮ್ಮ ಮೊಬೈಲ್ ಫೋನ್ನಲ್ಲಿ ಅನಿರೀಕ್ಷಿತವಾಗಿ ಜೋರಾದ ಸೈರನ್ ಶಬ್ದ ಕೇಳಿಬಂದರೆ ಅಥವಾ ಪರದೆಯ ಮೇಲೆ ವಿಶೇಷ ಸಂದೇಶಗಳು ಮೂಡಿಬಂದರೆ ಗಾಬರಿಪಡುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನಡೆಸುತ್ತಿರುವ ‘ಸೆಲ್ ಬ್ರಾಡ್ಕಾಸ್ಟ್ ಅಲರ್ಟ್’ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವಾಗಿದೆ. ಪ್ರವಾಹ, ಭೂಕಂಪ ಅಥವಾ ಸುನಾಮಿಯಂತಹ ತುರ್ತು ಸಂದರ್ಭಗಳಲ್ಲಿ ಜನರನ್ನು ಮೊದಲೇ ಎಚ್ಚರಿಸಿ, ಸಾವು-ನೋವುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಹೈಟೆಕ್ ತಂತ್ರಜ್ಞಾನವನ್ನು ಸರ್ಕಾರ ಅಭಿವೃದ್ಧಿಪಡಿಸಿದೆ. ಇದರ ಭಾಗವಾಗಿ ಇಂದು (ಮೇ 2) ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮೊಬೈಲ್ ಬಳಕೆದಾರರಿಗೆ ಇಂತಹ ಎಚ್ಚರಿಕೆಯ ಸಂದೇಶಗಳು ಬರಲಿವೆ.

ಈ ವಿಶೇಷ ಎಚ್ಚರಿಕೆ ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಹ ಈ ಸಂದೇಶಗಳು ನೇರವಾಗಿ ಲಭ್ಯವಾಗುತ್ತವೆ. ಪರೀಕ್ಷಾರ್ಥ ಪ್ರಯೋಗದ ಸಮಯದಲ್ಲಿ ಫೋನ್ ಜೋರಾಗಿ ವೈಬ್ರೇಟ್ ಆಗುವುದು ಅಥವಾ ಬೀಪ್ ಸೈರನ್ ಮೊಳಗುವುದು ಸಾಮಾನ್ಯವಾಗಿದ್ದು, ಇಂತಹ ಸಂದೇಶಗಳನ್ನು ಸ್ವೀಕರಿಸಿದಾಗ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸರ್ಕಾರ ಮತ್ತು ಎನ್.ಡಿ.ಎಂ.ಎ ಸ್ಪಷ್ಟಪಡಿಸಿದೆ. ಇದು ಕೇವಲ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಮಾಡಲಾಗುತ್ತಿರುವ ಒಂದು ತಾಂತ್ರಿಕ ಪ್ರಕ್ರಿಯೆಯಾಗಿದೆ.

ಭಾರತವು ತನ್ನದೇ ಆದ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿದ್ದು, ಯಾವುದೇ ಪ್ರಕೃತಿ ವಿಕೋಪಗಳು ಸಂಭವಿಸುವ ಮುನ್ನವೇ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಈ ಫ್ಲ್ಯಾಶ್ ಎಸ್ಎಂಎಸ್ (Flash SMS) ಪದ್ಧತಿ ಸಹಕಾರಿಯಾಗಲಿದೆ. ಮೊಬೈಲ್ ಸೈಲೆಂಟ್ ಮೋಡ್ನಲ್ಲಿದ್ದರೂ ಅಥವಾ ಲಾಕ್ ಆಗಿದ್ದರೂ ಈ ಸಂದೇಶಗಳು ಪರದೆಯ ಮೇಲೆ ಮೂಡಲಿವೆ. ಈ ಸುಧಾರಿತ ತಂತ್ರಜ್ಞಾನದ ಮೂಲಕ ಕೋಟ್ಯಂತರ ಜನರನ್ನು ಏಕಕಾಲದಲ್ಲಿ ತಲುಪಲು ಸಾಧ್ಯವಿದ್ದು, ಭವಿಷ್ಯದ ವಿಪತ್ತು ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.




